ADVERTISEMENT

ಪರಿಸರ ಮಾಲಿನ್ಯದಿಂದ ಗಂಡಾಂತರ: ಬಿ.ಪಿ. ಹಳ್ಳೂರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 7:25 IST
Last Updated 11 ಫೆಬ್ರುವರಿ 2012, 7:25 IST

ಸುರಪುರ: ಪರಿಸರ ಮಾಲಿನ್ಯ, ಅರಣ್ಯ ನಾಶ, ನೈರ್ಮಲ್ಯ ಕಾಪಾಡದಿರುವುದು ಇವುಗಳಿಂದ ಮಾನವ ಜೀವಕ್ಕೆ ಗಂಡಾಂತರ ಬರುತ್ತಿದೆ. ಓಜೋನ್ ಪದರು ಹಾಳಾಗಿ ಅಪಾಯಕಾರಿ ನೇರಳೆ ಕಿರಣಗಳು ನಮ್ಮನ್ನು ಘಾಸಿಗೊಳಿಸುತ್ತಿವೆ. ಪರಿಸರವನ್ನು ರಕ್ಷಿಸದಿದ್ದರೆ ನಮ್ಮ ಸಾವನ್ನು ನಾವೆ ತಂದುಕೊಂಡಂತಾಗುತ್ತದೆ ಎಂದು ಕೃಷ್ಣಾ ಕಾಡಾ ಅಧ್ಯಕ್ಷ ಬಿ. ಪಿ. ಹಳ್ಳೂರಎಚ್ಚರಿಸಿದರು.

ಇಲ್ಲಿನ ಅರುಂಧತಿ ಸ್ವತಂತ್ರ ಪದವಿಪೂರ್ವ ಕಾಲೇಜಿನ `ಯುಕೋ ಕ್ಲಬ್~ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಯುಕೋಕ್ಲಬ್ ಪರಿಸರ ಜಾಗೃತಿಗಾಗಿಯೇ ಪ್ರತಿ ಕಾಲೇಜಿನಲ್ಲಿ ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪರಿಸರ ರಕ್ಷಣೆಯ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಬೇಕು. ಆಗಾಗ ಇದರ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಬೇಕು. ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.

ಹಿರಿಯ ಸಾಹಿತಿ ಮಾನು ಸಗರ್ ಮಾತನಾಡಿ, ಅನಕ್ಷರತೆ ಮತ್ತು ಅಜ್ಞಾನದಿಂದ ಪರಿಸರ ನಾಶ ಒಂದೆಡೆಯಾದರೆ, ನಗರೀಕರಣ ಮತ್ತು ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ನಡೆಯುತ್ತಿದೆ. ವಾಹನಗಳ ದಟ್ಟಣೆಯೂ ಪರಿಸರದ ಹಾನಿಗೆ ಕಾರಣವಾಗಿದೆ. ಅರಣ್ಯನಾಶ ಅವ್ಯಾಹತವಾಗಿ ನಡೆಯುತ್ತಿದೆ. ನಾವು ಈಗಿನಿಂದಲೆ ಈ ಬಗ್ಗೆ ಎಚ್ಚರವಹಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು.

ಜಾನಕಿದೇವಿ ಪ್ರೌಢಶಾಲೆಯ ಮುಖ್ಯ ಗುರು ಜಿ. ಸಂಪತಕುಮಾರ್, ಕೆಂಭಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ್ ಕೊಂಕಲ್, ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ. ಎಲ್. ಚವ್ಹಾಣ ಮಾತನಾಡಿದರು.


ಹೇಮಲತಾ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಕಮತಗಿ ಸ್ವಾಗತಿಸಿದರು. ಶಾಂತಗೌಡ ಪಾಟೀಲ ಮುದನೂರ್ ಪ್ರಾಸ್ತಾವಿಕ ಮಾತನಾಡಿದರು. ರಜಾಕ್ ಭಾಗವಾನ್ ನಿರೂಪಿಸಿದರು. ವಿಜಯಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT