ADVERTISEMENT

ಭೈರಿಮರಡಿ ಗ್ರಾಮಕ್ಕೆ ‘ಗುಳೆ’ ಸಮಸ್ಯೆ

ಅಶೋಕ ಸಾಲವಾಡಗಿ
Published 18 ಮಾರ್ಚ್ 2014, 9:22 IST
Last Updated 18 ಮಾರ್ಚ್ 2014, 9:22 IST

ಸುರಪುರ: ತಾಲ್ಲೂಕಿನ ಭೈರಿಮರಡಿ ಗ್ರಾಮದ ಶೇಕಡಾ ಅರ್ಧದಷ್ಟು ಜನ ಊರಿನಲ್ಲಿ ಇರುವುದೇ ಇಲ್ಲ. ಹೊಟ್ಟೆ ಹೊರೆಯಲು ಕೆಲಸ ಅರಸಿ ದೂರದ ನಗರಗಳಿಗೆ ‘ಗುಳೆ’ ಹೋಗುವುದರಲ್ಲಿ ತಾಲ್ಲೂಕಿನಲ್ಲಿಯೇ ಹೆಚ್ಚು. ಹೀಗಾಗಿ ಈ ಗ್ರಾಮ ಜನರಿಲ್ಲದೆ ಸದಾ ಭಣಗುಡುತ್ತದೆ.
‘ಗುಳೆ’ ಸಮಸ್ಯೆಗೆ ಪರಿಹಾರವಂತೂ ಇದುವರೆಗೂ ಸಿಕ್ಕಿಲ್ಲ. ವರ್ಷಕ್ಕೆ ಕನಿಷ್ಟ 100 ದಿನ ಕೂಲಿ ನೀಡುವ ನರೇಗಾ ಯೋಜನೆ ಇಲ್ಲಿ ಸಮರ್ಪಕವಾಗಿ ಅನು­ಷ್ಠಾನವಾಗಿಲ್ಲ. ‘ಗುಳೆ’ ಹೋದವರ ಬದುಕು ಸದಾ ಅಭದ್ರವಾಗಿರುತ್ತದೆ. ಅವರ ಮಕ್ಕಳ ಶಿಕ್ಷಣವಂತೂ ಮರೀಚಿಕೆ. ಗ್ರಾಮದ ಸಾಕ್ಷರತೆ ಶೇ 25 ಮಾತ್ರ.

ಮೂಲಸೌಕರ್ಯವಂತೂ ಈ ಗ್ರಾಮಕ್ಕೆ ಗಗನ ಕುಸುಮ. ಮಹಿಳಾ ಶೌಚಾಲಯ ಇಲ್ಲ. ಇಡೀ ಗ್ರಾಮದಲ್ಲಿ ತಿರುಗಾಡಿದರೆ ಕೇವಲ ಒಬ್ಬರ ಮನೆಯಲ್ಲಿ ಮಾತ್ರ ಶೌಚಾ­ಲಯ ಇದೆ. ಬಯಲು ಮುಕ್ತ ಶೌಚಾಲಯ ಉದ್ದೇಶದ ನಿರ್ಮಲ ಭಾರತ ಯೋಜನೆ ಈ ಊರಿಗೆ ಕಾಲಿಟ್ಟಿಲ್ಲ.
ಕಿರು ನೀರು ಸರಬರಾಜು ಯೋಜನೆ ಸಮರ್ಪಕವಾಗಿಲ್ಲ. ಇರುವ ಎರಡು ಕೊಳವೆ­ಬಾವಿಗಳು ಸದಾ ದುರಸ್ತಿಯಲ್ಲಿ ಇರು­ತ್ತವೆ.

ಗ್ರಾಮದಲ್ಲಿರುವ ಎರಡು ತೆರೆದ ಬಾವಿಗಳ ನೀರು ಕೆಟ್ಟು ಹೋಗಿದೆ. ಜನ ನೀರಿನ ಸಮಸ್ಯೆ ಎದುರಿಸುತ್ತಿ­ದ್ದಾರೆ. ಸಿ.ಸಿ. ರಸ್ತೆ ಇಲ್ಲ. ಚರಂಡಿ ಇದ್ದರೂ ಸ್ವಚ್ಛ ಮಾಡುವುದಿಲ್ಲ. ಕಾರಣ ಕೊಳಚೆ ನೀರು ಸದಾ ರಸ್ತೆಯ ಮೇಲೆ ಹರಿಯುತ್ತಿರು­ತ್ತದೆ. ಆಸ್ಪತ್ರೆ ಇಲ್ಲದ ಕಾರಣ ರೋಗಿಗಳು ಸುರಪುರ ಪಟ್ಟ­ಣಕ್ಕೆ ಬರಬೇಕು. ತಿಪ್ಪೆಗುಂಡಿಗಳು ಇಲ್ಲಿ ಸಾಮಾನ್ಯ. ಇದರಿಂದ ಸಾಂಕ್ರಾಮಿಕ ರೋಗಗಳು ಆಗಾಗ ಹರಡುತ್ತಿರುತ್ತವೆ.
5ನೇ ತರಗತಿವರೆಗೆ ಶಾಲೆ ಇದ್ದರೂ, ಶಿಕ್ಷಕರ ಕೊರತೆ ಇದೆ. ಪಾಲಕರ ಜೊತೆಗೆ ಮಕ್ಕಳು ‘ಗುಳೆ’ ಹೋಗುವುದರಿಂದ ಹಾಜ­ರಾತಿ ಕಡಿಮೆ. ಆಟದ ಮೈದಾನ ಇಲ್ಲ. ಗ್ರಾಮದ ಜನ ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಗ್ರಾಮದ ಪ್ರಜ್ಞಾವಂತರ ಆರೋಪ.

ಮದ್ಯಮಾರಾಟ ರಾಜಾರೋಷವಾಗಿ ನಡೆ­ಯುತ್ತದೆ. ಕಿರಾಣಿ ಅಂಗಡಿ, ಹೊಟೇಲ್, ಪಾನಶಾಪ್‌ಗಳಲ್ಲಿ ಮದ್ಯದ ಬಾಟಲಿಗಳು ಲಭ್ಯ. ಬೆಳಿಗ್ಗೆಯಿಂದಲೆ ಮದ್ಯ­ಪಾನ ಆರಂಭವಾಗುತ್ತದೆ. ಇದ­ರಿಂದ ಗ್ರಾಮದ ಸೌಹಾರ್ದ ಹದಗೆಟ್ಟಿದೆ. ಅಬ­ಕಾರಿ ಇಲಾಖೆ ಇತ್ತ ಕಡೆ ಗಮನ­ಹರಿಸಿಲ್ಲ ಎನ್ನುತ್ತಾರೆ ಮಹಿಳೆಯರು.

ಸಾಕಷ್ಟು ಕೃಷಿ ಭೂಮಿ ಇದೆ. ನೀರಾವರಿ ಸೌಲಭ್ಯವೂ ಇದೆ. ಗ್ರಾಮದಲ್ಲಿ ಬಹುತೇಕ ರೈತರು ಕೂಲಿ ಅರಸಿ ‘ಗುಳೆ’ ಹೋಗುವು­ದರಿಂದ ಕೃಷಿ ಚಟುವಟಿಕೆ ಸಮರ್ಪವಾಗಿ ನಡೆಯುತ್ತಿಲ್ಲ. ಕೃಷಿ ಇಲಾಖೆಯಿಂದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ ಎಂಬುದು ರೈತರ ಅಳಲು. ಕಳೆದ ವರ್ಷ ಯುವ ರೈತನೊಬ್ಬ ಗುಲಾಬಿ ಪುಷ್ಪ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಕೆಲ ಯುವಕರು ಈ ರೈತನ ಹಾದಿ ಹಿಡಿದಿ­ರು­ವುದು ಗಮನಾರ್ಹ.

ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆ ಇಲ್ಲ. ಆದರೆ, ಬೀದಿ ದೀಪಗಳು ನಿರಂತರ ಉರಿಯುವುದು ಇಲ್ಲಿನ ಸಮಸ್ಯೆ. ದೇವರಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಹಳ್ಳಿ 1500 ಜನ­ಸಂಖ್ಯೆ ಹೊಂದಿದೆ. ಮೂರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಬೇಡ, ಕುರುಬ, ದಲಿತ ಜನಾಂಗದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಆರಂಭಿಸಬೇಕು. ಸಿ.ಸಿ. ರಸ್ತೆ ನಿರ್ಮಿಸ­ಬೇಕು. ಸಮರ್ಪಕ ನೀರು ಸರಬರಾಜು ಮಾಡ­ಬೇಕು. ಮೂಲಸೌಕರ್ಯ­ಗಳನ್ನು ಒದಗಿಸ­ಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಬನ್ನೆಟ್ಟಿ.

‘ಶೌಚಾಲಯ ನಿರ್ಮಿಸಿ’
‘ಭೈರಿಮರಡಿ ಗ್ರಾಮದಲ್ಲಿ ಮಹಿಳಾ ಶೌಚಾಲಯ ಇಲ್ಲದಿ­ರುವುದು ನಾಚಿಕೆ­ಗೇಡು. ಶೀಘ್ರದಲ್ಲಿ ಶೌಚಾಲಯ ನಿರ್ಮಿ­ಸ­ಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು. ವಿಳಂಬವಾದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ಮಾಡಲಾಗುವುದು’.
–ವೆಂಕಟೇಶನಾಯಕ ಭೈರಿಮರಡಿ, ಪ್ರಧಾನ ಕಾರ್ಯದರ್ಶಿ, ಕರವೇ

‘ಸೌಕರ್ಯ ಒದಗಿಸಲು ಬದ್ಧ’
‘ಗ್ರಾಮ ಪಂಚಾಯಿತಿ ಸಭೆ­ಯಲ್ಲಿ ಭೈರಿಮರಡಿಗೆ ಮಹಿಳಾ ಶೌಚಾ­ಲಯ ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ. ಕೆಲ ದಿನಗಳ ಹಿಂದೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಮಹಿಳಾ ಶೌಚಾಲಯ ನಿರ್ಮಿಸಲು ಸೂಚಿಸಿದ್ದಾರೆ. ಮೂಲಸೌಕರ್ಯ­ಗಳನ್ನು ಒದಗಿಸಲು ಬದ್ಧನಾಗಿದ್ದೇನೆ’.
–ಸಣ್ಣದೇಸಾಯಿ ನಾಯಕ, ಅಧ್ಯಕ್ಷರು, ಗ್ರಾ.ಪಂ.ದೇವರಗೋನಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.