ಯಾದಗಿರಿ: ಗ್ರಾಮೀಣ ಭಾಗದ ಮಕ್ಕಳನ್ನು ವಸತಿ ಶಾಲೆಗೆ ಸೇರ್ಪಡೆ ಮಾಡಿದ ತಕ್ಷಣ ಪಾಲಕರು ತಮ್ಮ ಜವಾಬ್ದಾರಿ ಮರೆತು ಬಿಡುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿ ಬಿ.ಎಸ್.ಪಾಟೀಲ ಹೇಳಿದರು.
ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಈ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು. ಎಸ್.ಎಸ್.ಎಲ್.ಸಿ ಅಭ್ಯಾಸ ಮಾಡುತ್ತಿರುವ ವಸತಿ ಶಾಲೆ ಮಕ್ಕಳು ಇಂದು ಅತಿ ಹೆಚ್ಚು ಅಂಕ ಪಡೆದು ತಮ್ಮ ಪ್ರತಿಭೆ ತೋರುತ್ತಿರುವುದು ಶ್ಲಾಘನೀಯ.
ಈ ನಿಟ್ಟಿನಲ್ಲಿ ವರ್ಷ ಪೂರ್ತಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಆಗಾಗ್ಗೆ ಭೇಟಿ ನೀಡಿ ಶಾಲೆ ಅಭಿವೃದ್ಧಿ ಮತ್ತು ತಮ್ಮ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ವಿಚಾರಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, ಸರ್ಕಾರ ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ಮಕ್ಕಳ ಫಲಿತಾಂಶದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ನಿಯಮಾವಳಿಯನ್ನು ಪಾಲಕರಾದವರು ಪಾಲಿಸಬೇಕು. ಅಭ್ಯಾಸದ ಅವಧಿಯಲ್ಲಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ಅಭ್ಯಾಸ ಹಾಳು ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪಾಲಕರು ಮನಗಾಣಬೇಕು ಎಂದರು.
ಸುರೇಶ ತಡಿಬಿಡಿ, ಮಲ್ಲೇಶ ಕುರಕುಂದಿ, ಶಂಭುಲಿಂಗ ಪಾಟೀಲ, ಶಾಂತಾಬಾಯಿ ಸಜ್ಜನ್, ಚನ್ನಕೇಶವಗೌಡ ಜಲಾಲ, ಅಶೋಕ ಕಾಂತಿ ಯಂಕಪ್ಪ ಬಸವಂತಪುರ ಸೇರಿದಂತೆ ಇನ್ನಿತರರು ಇದ್ದರು. ಪಾಲಕರೊಂದಿಗೆ ಶಾಲಾ ಮಕ್ಕಳ ವಾರ್ಷಿಕ ವರದಿ ಮತ್ತು ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.