ADVERTISEMENT

ರಾಹುಲ್ ಹೋದ ಕಡೆ ಕಾಂಗ್ರೆಸ್‌ಗೆ ಸೋಲು

ಪ್ರಚಾರ ಸಭೆಯಲ್ಲಿ ಮಾಲೀಕಯ್ಯ ಗುತ್ತೇದಾರ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2018, 13:44 IST
Last Updated 9 ಮೇ 2018, 13:44 IST

ಯಾದಗಿರಿ: ‘ರಾಹುಲ್‌ ಗಾಂಧಿ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಕಾಂಗ್ರೆಸ್‌ಗೆ ಸೋಲಾಗಲಿದೆ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಟೀಕಿಸಿದರು.

ಸಮೀಪದ ವಡಗೇರಾದಲ್ಲಿ ಮಂಗಳವಾರ ಅವರು ಯಾದಗಿರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಪರ ಪ್ರಚಾರ ನಡೆಸಿದರು.

‘ರಾಹುಲ್‌ ಗಾಂಧಿಯವರಿಗೆ ಅಧಿಕಾರ ಸಿಗುವುದಿಲ್ಲ ಎಂಬುವುದರ ಅರಿವು ಇದೆ. ಗುಡ್ಡೆ ಬಿದ್ದಿರುವ ಪಕ್ಷದ ಫಂಡ್‌ನಲ್ಲಿ ಸಂತೋಷವಾಗಿ ಕಾಲ ಕಳೆಯುವ ಹವಣಿಕೆಯಲ್ಲಿ ಇದ್ದಾರೆ’ ಎಂದು ಛೇಡಿಸಿದರು.

ADVERTISEMENT

‘ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಐಟಿ–ಬಿಟಿ ಸಚಿವರಾಗಿ ಯಾವ ತಂತ್ರಜ್ಞಾನವನ್ನು ಇಲ್ಲಿ ತಂದು ಹಾಕಿದ್ದಾರೆ ಹೇಳಿ’ ಎಂದು ಪ್ರಶ್ನಿಸಿದರು.

‘ಅಧಿಕಾರದ ಅಮಲಿನಲ್ಲಿ ಕಾಲಹರಣ ಮಾಡಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿದ್ದರೂ ಪ್ರಾಮಾಣಿಕ ವಾಗಿ ಪರಿಹರಿಸುವ ಗೋಜಿಗೆ ಹೋಗಿಲ್ಲ’ ಎಂದು ಆರೋಪಿಸಿದರು.

‘ಕ್ಷೇತ್ರದಲ್ಲಿ ಸಾಕಷ್ಟು ವಿದ್ಯಾವಂತ ಯುವಕರು ಇದ್ದಾರೆ. ಉದ್ಯೋಗ ಸೃಷ್ಟಿ ಮಾಡಿದ್ದರೆ ಅದೆಷ್ಟೋ ಯುವಕರ ಬದುಕಿಗೆ ಆಸರೆಯಾಗುತ್ತಿತ್ತು. ಸಿಕ್ಕ ಅವಕಾಶವವನ್ನು ಸದ್ಬಳಕೆ ಮಾಡಿಕೊಂಡು ಜನಪರ ಕಾಳಜಿ ಕೆಲಸ ಮಾಡಿದ್ದರೆ. ಕ್ಷೇತ್ರದ ಜನರು ಎಂದಿಗೂ ಅವರನ್ನು ಮರೆಯುತ್ತಿರಲಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅದ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿದರು.

ಯಾದಗಿರಿ ನಗರಸಭೆಯ ಅಧ್ಯಕ್ಷೆ ಲಲಿತಾ ಅನಪೂರ, ಶ್ರೀನಿವಾರಡ್ಡಿ ಚೆನ್ನೂರ, ದೇವರಾಜ ನಾಯಕ ಉಳ್ಳೆಸೂಗೂರ, ಮಲ್ಲಿಕರ್ಜುನ ಸಾಹು ಕರಣಗಿ, ಶಂಕ್ರರಣ್ಣ ಸಾಹು ಕರಣಗಿ, ಶಿವರಾಜಪ್ಪಗೌಡ ಬೆಂಡೆಬೆಂಬಳಿ, ಶ್ರೀನಿವಾಸರಾವ ಕುಲಕರ್ಣಿ, ಸಾಬಯ್ಯ ಗುತ್ತೇದಾರ, ಶಿವುಕುಮಾರ ಕೊಂಕಲ್, ನಾರಾಯಣ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.