ADVERTISEMENT

ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:15 IST
Last Updated 20 ಸೆಪ್ಟೆಂಬರ್ 2013, 8:15 IST

ಸುರಪುರ: ಅನ್ನದಲ್ಲಿ ಹುಳು ಬರುತ್ತಿವೆ ಎಂದು ಆರೋಪಿಸಿ ಸರ್ಕಾರಿ ಬಾಲಕರ ಪದವಿ ಕಾಲೇಜಿನ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ಯಾಮಲಾ ಕಮತಗಿ  ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗೆ ಸಮರ್ಪಕ ಪರಿಶೀಲನೆ ನಡೆಸುವಂತೆ ಮೌಖಿಕ ಆದೇಶ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ  ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಇನಾಮದಾರ, ಅಧೀಕ್ಷಕ ವೈ. ಬಿ. ದಿವಾಕರ್ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಡಿತರ ಸಂಗ್ರಹ ಕೋಣೆಯಲ್ಲಿ ಅಕ್ಕಿ, ಗೋಧಿ, ಎಣ್ಣೆ ಇತರ ಆಹಾರ ಸಾಮಗ್ರಿಯನ್ನು ಪರಿಶೀಲಿಸಿದರು. ಅಡುಗೆ ಕೋಣೆಯನ್ನು ಸ್ವಚ್ಛವಾಗಿಡುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಿದರು. ವಾರ್ಡನ್ ಮತ್ತು ಸಿಬ್ಬಂದಿಗೆ ಸಮರ್ಪಕ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದರು.

ಪಡಿತರ ಒಳ್ಳೆಯ ಗುಣಮಟ್ಟದಿಂದ ಕೂಡಿದೆ. ಅಕ್ಕಿಯನ್ನು ಸ್ವಚ್ಛಗೊಳಿಸ­ದೇ ಇರುವುದರಿಂದ ಹುಳು ಬಂದಿರ­ಬಹುದು. ಮುಂದೆ ಹೀಗಾಗದಂತೆ ಎಚ್ಚರವಹಿಸಲಾಗುವುದು. ಕುಡಿಯುವ ನೀರನ್ನು ಸೋಸಿ, ಸ್ವಚ್ಛವಾಗಿಟು್ಟ­ಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಇನಾಮದಾರ ತಿಳಿಸಿದರು.

ವಸತಿ ನಿಲಯಕ್ಕ ಸ್ವಂತ ಕಟ್ಟಡವಿಲ್ಲ. ಪೂರ್ಣಾವಧಿಯ ವಾರ್ಡನ್ ಇಲ್ಲ. ಒಬ್ಬ ವಿದ್ಯಾರ್ಥಿಗೆ ಕೇವಲ ರೂ. 25 ಅನುದಾನ ಇದೆ. ಇದರಲ್ಲಿ ಉಪಾ­ಹಾರ, ಎರಡು ಬಾರಿ ಊಟ ನೀಡ­ಬೇಕು. ಅಡುಗೆ ಸಿಬ್ಬಂದಿ ಕೊರತೆ ಇದೆ. ಜೋರು ಮಾಡಿದರೆ ಅಡುಗೆ ಸಹಾ­ಯಕ ಸಿಬ್ಬಂದಿ ಬಿಟ್ಟು ಹೋಗುತ್ತಾರೆ ಎಂದು ನಿಲಯದ ವಾರ್ಡನ್ ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮನಗೌಡ ಕನ್ನೊಳ್ಳಿ ಮಾತನಾಡಿ, ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ಈ ಸಮಸ್ಯೆ ಕಾಣುತ್ತಿವೆ. ಕಟ್ಟಡಕ್ಕೆ ಸರ್ಕಾರ ಅನುದಾನ ಒದಗಿಸುತ್ತದೆ. ಆದರೆ ಸ್ಥಳವನ್ನು ಕಂದಾಯ ಇಲಾಖೆ ಒದಗಿಸ­ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಜಿಲ್ಲೆಯ ವಸತಿ ನಿಲಯಗಳಲ್ಲಿ ಸಮಸ್ಯೆ ಸಾಕಷ್ಟಿವೆ. ಕಟ್ಟಡಕ್ಕೆ ಅನುದಾನ ಬರುತ್ತದೆ. ಆದರೆ ನಿವೇಶನದ ಕೊರತೆ ಇದೆ. ಒಬ್ಬ ವಿದ್ಯಾರ್ಥಿಗೆ ಸಧ್ಯ ಇರುವ ಅನುದಾನ ರೂ. 25 ರಿಂದ ರೂ. 30 ಕ್ಕೆ ಹೆಚ್ಚಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಇದ್ದ ಅನುಕೂಲಗಳಲ್ಲೆ ಅಧಿಕಾರಿಗಳ ಸಮರ್ಪಕ ಕೆಲಸ ಮಾಡಬೇಕು. ಯಾವುದೆ ತೊಂದರೆ ಬರದ ಹಾಗೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ಯಾಮಲಾ ಎಂ. ಕಮತಗಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.