ಯಾದಗಿರಿ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆಗಳು ಯಾದಗಿರಿ ತಾಲೂಕಿನಲ್ಲಿದ್ದರೂ, ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ನಿವಾರಿಸಲು ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ಚಳುವಳಿ ಆರಂಭಿಸಲಾಗುವುದು ಎಂದು ಗುಲ್ಬರ್ಗ ನೀರಾವರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)ದ ಅಧ್ಯಕ್ಷ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಹೇಳಿದರು.
ಮಂಗಳವಾರ ಹತ್ತಿಕುಣಿ ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀರಾವರಿ ತಜ್ಞರನ್ನು ಕರೆಯಿಸಿ ಅವರೊಂದಿಗೆ ಚರ್ಚಿಸಲಾಗುವುದು. ಇಲ್ಲಿನ ಸಂಘ-ಸಂಸ್ಥೆಗಳು, ಯುವಕರು ಹಾಗೂ ರೈತರೊಂದಿಗೆ ಸೇರಿ, ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರಿಂದ ರೈತರು ಮಹಾನಗರಳಿಗೆ ಗುಳೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಜೊತೆಗೆ ಆಹಾರ ಉತ್ಪಾದನೆ ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಗುರಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಕಾಯಕದ ಜೊತೆಗೆ ಪ್ರಾಮಾಣಿಕ ಹೋರಾಟ ಮನೋಭಾವ ಇದ್ದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ನಾಡಿನ ಅನ್ನದಾತನಾಗಿರುವ ರೈತರ ಸಮಸ್ಯೆಗೆ ಕಾಡಾ ಅಧ್ಯಕ್ಷರು ಸ್ಪಂದಿಸಿರುವುದು ಬದಲಾವಣೆಯ ಸಂಕೇತ ಎಂದು ಬಣ್ಣಿಸಿದರು.
ಜಲಾಶಯದ ಪರಿಸರವು ಜಿಲ್ಲೆಯ ಆಕರ್ಷಣಿಯ ಸ್ಥಳವಾಗಿದೆ. ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು. ಶರಣಪ್ಪ ಸಾಹುಕಾರ, ರವಿ ಪಾಟೀಲ, ಭೀಮರಡ್ಡಿ ರಾಂಪೂರಳ್ಳಿ, ಚಂದ್ರಕಾಂತ ಕವಲ್ದಾರ, ಚಂದ್ರರಡ್ಡಿ ಬಂದಳ್ಳಿ, ವಿಠಲ್ ದಿಗ್ಗಿ,
ವೆಂಕಟರಡ್ಡಿ ಕೌಳೂರ, ನರಸಪ್ಪ ಭಿಮನಳ್ಳಿ, ಸುಭಾಷ್ ನಾಯಕ, ನಿಂಗಪ್ಪ ಹೊನಿಗೇರಿ, ಹಣಮಂತಪ್ಪ ಕೋಳಿ, ಸಾಬಣ್ಣ ಶೇಲೆರಿ, ಮೀರಸಾಬ ಇನಾಮದಾರ, ತಾಯಪ್ಪ ದುಗನೂರ, ಕಾಡಾ ಅಧಿಕಾರಿಗಳಾದ ಅನ್ಸಾರಿ, ನಾಯಕ, ನೀರಾವರಿ ಇಲಾಖೆ ಇಂಜಿನಿಯರ್ ಬಸವರಾಜ, ಜಲಾಶಯ ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು.
ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ಗಡೇದ ಸ್ವಾಗತಿಸಿದರು. ವೆಂಕಟರಡ್ಡಿ ಕೌಳೂರ ನಿರೂಪಿಸಿದರು. ಸುಭಾಷ ನಾಯಕ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.