ADVERTISEMENT

ಹತ್ತಿ ಬೆಳೆಗೆ ಕೆಂಪು ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 10:13 IST
Last Updated 13 ಅಕ್ಟೋಬರ್ 2017, 10:13 IST
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಬಳಿ ಹತ್ತಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ನೀರು ನಿಂತಿವೆ
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಬಳಿ ಹತ್ತಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ನೀರು ನಿಂತಿವೆ   

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿನ ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಗೆ ಕೆಂಪು ರೋಗ ಕಾಣಿಸಿಕೊಂಡಿದೆ. ಕಾಯಿ ಕಟ್ಟುವ ಹಂತದಲ್ಲಿ ಇರುವಾಗ ಹೆಚ್ಚಿನ ಮಳೆ ಆಗಿದ್ದರಿಂದ ಬೆಳೆಗೆ ರೋಗ ಆವರಿಸಿಕೊಂಡಿದೆ. ತೊಗರಿ ಬಿತ್ತನೆ ಮಾಡಿದ ಜಮೀನುಗಳ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ನಟೆ ರೋಗದ
(ತೊಗರಿ ಬೆಳೆ ಒಣಗುವುದು) ಬರುವ ಲಕ್ಷಣಗಳು ಕಂಡು ಬಂದಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಭೀಮಾ ನದಿ ಪಾತ್ರದ ಗ್ರಾಮಗಳಾದ ನಾಲವಡಗಿ, ಬಬಲಾದ, ಗೊಂದೆನೂರ, ನಾಯ್ಕಲ್, ಬಿರನಾಳ ವ್ಯಾಪ್ತಿಯಲ್ಲಿ ನಾಟಿ ಮಾಡಿದ್ದ ಭತ್ತದ ತೆನೆ ಕಟ್ಟುವ ಹಂತದಲ್ಲಿ ಇರುವಾಗ ಮಳೆಯಾದ ಕಾರಣ ಭತ್ತ ನೆಲಕ್ಕುರುಳಿದೆ. ಪ್ರಾಥಮಿಕ ವರದಿಯಂತೆ 167 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಮುಡಬೂಳ, ಅಣಬಿ, ಶಿರವಾಳ, ಮದ್ರಿಕಿ, ಗೋಗಿ ಮುಂತಾದ ಪ್ರದೇಶದಲ್ಲಿ 130 ಹೆಕ್ಟೇರ್‌ ಹತ್ತಿ ಬೆಳೆ ನಷ್ಟವಾಗಿದೆ.

‘ಬ್ಯಾಡಗಿ ಹಾಗೂ ಗುಂಟೂರ ಮೆಣಸಿನಕಾಯಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ಬೆಳೆ ಕೊಳೆಯುವ ಭೀತಿ ಉಂಟಾಗಿದೆ. ಮೋಡ ಮುಸುಕಿನ ವಾತಾವರಣದಿಂದ ರೋಗ ಕಾಣಿಸಿಕೊಳ್ಳುತ್ತವೆ. ಹಸಿ ಬರದ ಛಾಯೆ ಆವರಿಸಿದೆ’ ಎಂದು ಮುಡಬೂಳ ಗ್ರಾಮದ ರೈತ ಗೋಪಣ್ಣ ಹವಾಲ್ದಾರ ತಿಳಿಸಿದರು.

ADVERTISEMENT

‘ಮಳೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡರೆ ಹಿಂಗಾರು ಬಿತ್ತನೆ ಕಾರ್ಯ ಚುರುಕುಗೊಳ್ಳುವುದು. ಹೂವಾಡುವ ಹಂತದಲ್ಲಿರುವ ತೊಗರಿ ಉತ್ತಮ ಇಳುವರಿ ಬರುತ್ತದೆ’ ಎಂದು ಅವರು ತಿಳಿಸಿದರು.

ಅಕ್ಟೋಬರ ತಿಂಗಳಲ್ಲಿ ವಾಡಿಕೆ ಮಳೆಯು 119 ಮಿ.ಮೀ.ನಿರೀಕ್ಷಿಸಲಾಗಿತ್ತು. ಆದರೆ (ಅ.10)ವರೆಗೆ ವಡಿಗೇರಾ ಹೋಬಳಿ ವ್ಯಾಪ್ತಿಯಲ್ಲಿ 205 ಮಿ.ಮೀ ಮಳೆ ಆಗಿದೆ. ಶಹಾಪುರ–136 ಮಿ.ಮೀ., ಗೋಗಿ–151 ಮಿ.ಮೀ., ಭೀಮರಾಯನಗುಡಿ–167ಮಿ.ಮೀ., ಹಯ್ಯಾಳ–158 ಮಿ.ಮೀ, ದೋರನಹಳ್ಳಿ–160 ಮಿ.ಮೀ ಮತ್ತು ಹತ್ತಿಗೂಡೂರ 82 ಮಿ.ಮೀ. ಮಳೆಯಾಗಿದೆ. ಇದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.