ಹುಣಸಗಿ: ‘ಸಾಹಿತ್ಯ ರಚನೆ ಎನ್ನುವುದು ಪ್ರತಿಯೊಬ್ಬರ ಅಂತರಾಳದಿಂದ ಹುಟ್ಟುವ ಭಾವನೆಗಳಿಗೆ ರೂಪ ಕೊಡುವುದಾಗಿದ್ದು, ಇದು ವಿವಿಧ ಪ್ರಾಕಾರಗಳನ್ನು ಹೊಂದಿದೆ’ ಎಂದು ಕಸಾಪ ಕೊಡೇಕಲ್ಲ ವಲಯ ಅಧ್ಯಕ್ಷ ಬಸಣ್ಣ ಗೊಡ್ರಿ ಹೇಳಿದರು.
ಸಮೀಪದ ಕೊಡೇಕಲ್ಲ ಗ್ರಾಮದಲ್ಲಿ ಶನಿವಾರ ನಡೆದ ‘ಚುಟುಕು ಸಾಹಿತ್ಯದ ನಡೆ ಶಾಲಾ– ಕಾಲೇಜು ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಕ್ಕಳಿಗೆ ಸಾಹಿತ್ಯ ಚಟುವಟಿಕೆ ಗಳಲ್ಲಿ ಆಸಕ್ತಿ ಮೂಡುವಂತೆ ಮಾಡಲು ಇಂತಹ ಕಾರ್ಯಕ್ರಮಗಳನ್ನು ಆಯೊಜಿಸ ಲಾಗುತ್ತಿದೆ’ ಎಂದು ತಿಳಿಸಿದರು.
ಸಾಹಿತಿ ಬೀರಣ್ಣ ಬಿ.ಕೆ.ಆಲ್ದಾಳ ಮಾತನಾಡಿ, ‘ಮಕ್ಕಳು ಕೂಡಾ ತಮ್ಮಲ್ಲಿನ ವಿನೂತನ ಶಬ್ದ ಭಂಡಾರವನ್ನು ಬಳಸಿಕೊಂಡು ಕವನ, ಕಥೆಗಳ ರಚನೆಯಲ್ಲಿ ತೊಡಗಿಕೊಳ್ಳಬೇಕು. ಮುಂದೆ ಅದುವೇ ಒಳ್ಳೆಯ ಸಾಹಿತ್ಯ ರಚನೆಗೆ ನಾಂದಿಯಾಗುತ್ತದೆ’ ಎಂದು ಹೇಳಿದರು.
‘ಎಷ್ಟು ಸಾಹಿತಿಗಳ ಚರಿತ್ರೆ, ಕಥೆ– ಕವನ ಅಧ್ಯಯನ ಮಾಡುತ್ತೇವೋ ಅಷ್ಟು ನಮ್ಮಲ್ಲಿನ ಜ್ಞಾನ ಹೆಚ್ಚಾಗುತ್ತ ಹೋಗುತ್ತದೆ. ಆದ್ದರಿಂದ ವಾರದಲ್ಲಿ ಒಂದು ದಿನ ಕನ್ನಡ ಸಾಹಿತ್ಯ ಪುಸ್ತಕಗಳ ಅಧ್ಯಯನ ಮತ್ತು ಮಹಾನ್ ನಾಯಕರ ಚರಿತ್ರೆ ತಿಳಿದುಕೊಳ್ಳುವ ಚರ್ಚಾ ಕಾರ್ಯಕ್ರಮ ಆಯೋಜಿಸಬೇಕು’ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಜಿ.ಎಸ್.ಗೂಡಲಮನಿ ಮಾತನಾಡಿ, ಚುಟುಕು ಸಾಹಿತ್ಯ ಮತ್ತು ಅದರ ಬೆಳವಣಿಗೆಯ ಕುರಿತು ತಿಳಿಸಿದರು.
ಸಂಗೀತ ಕಲಾವಿದ ಆಮಯ್ಯ ಸ್ವಾಮಿ ಹಿರೇಮಠ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಿರಿಯಪ್ಪ ಜಾವೂರು ಪ್ರಾಸ್ತಾವಿಕ ಮಾತನಾಡಿದರು. ಬದ್ರಪ್ಪ ಸ್ವಾಗತಿಸಿದರು. ಅಶೋಕ ಸಜ್ಜನ ನಿರೂಪಿಸಿದರು. ವಿಜಯರಡ್ಡಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.