ಯಾದಗಿರಿ: ಪರಿಸರ ಸಂರಕ್ಷಣೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಜಿಲ್ಲಾ ಘಟಕದ ವತಿಯಿಂದ ನಗರದ ಚಿರಂಜೀವಿ ನಗರದ ಆಂಜಿನೇಯ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪರಿಸರ ಅಸಮತೋಲನವಾಗುತ್ತಿದ್ದು, ತಾಪಮಾನ ಏರುತ್ತಿದೆ. ಇದರಿಂದ ಪ್ರಾಕೃತಿಕ ವಿಪತ್ತುಗಳು ಸಂಭವಿಸುವಂತಾಗಿವೆ. ಇವೆಲ್ಲವನ್ನು ಮನಗಂಡು ನಾವೆಲ್ಲರೂ ಮನೆಗೊಂದು ಸಸಿ ನೆಟ್ಟಲ್ಲಿ ಪರಿಸರ ರಕ್ಷಣೆಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ ದಾಸನಕೇರಿ ಮಾತನಾಡಿ, ಭ್ರಷ್ಟಾಚಾರದ ವಿರೋಧಿ ದಳದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ. ಬರಿ ಭ್ರಷ್ಟಾಚಾರ ವಿರೋಧಿ ಅಷ್ಟೇ ಅಲ್ಲದೇ ಮಾಲಿನ್ಯ ಸೃಷ್ಟಿಯ ವಿರೋಧಿಯಾಗಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ರಾಮದಾಸ ದುಪ್ಪಲ್ಲಿ ಮಾತನಾಡಿ, ದಳದ ರಾಜ್ಯಾಧ್ಯಕ್ಷ ಎ.ಟಿ. ಶಂಕರ ಅವರು ಮಹಾತ್ವಾಕಾಂಕ್ಷೆಯಿಂದ ಈ ಸಂಘಟನೆ ಹುಟ್ಟು ಹಾಕಿದ್ದು, ಎಲ್ಲೆಡೆ ವ್ಯಾಪಿಸಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ಸಂಘದ ಧ್ಯೇಯವಾಗಿದೆ ಎಂದು ಹೇಳಿದರು.
ನರಸಿಂಗ್ ರಾವ್ ಕುಲಕರ್ಣಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ದಳದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಜೇವರ್ಗಿ, ವಿಶ್ವನಾಥ ಆರ್., ನ್ಯಾಯವಾದಿ ಶಾಂತಪ್ಪ ಖಾನಳ್ಳಿ, ಕೆ.ಬಿ. ಅಂಗಡಿ, ರಮಾದೇವಿ ಎಚ್. ಕಾವಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.