ಯಾದಗಿರಿ: ಕೃಷ್ಣನೆಂದರೆ ಸೃಷ್ಟಿ, ಕೃಷ್ಣನೆಂದರೆ ಸಂಭ್ರಮ. ಗೋಪಾಲನಾಗಿ ಜಗದೇಕಪಾಲನಾಗಿಯೂ ಕೃಷ್ಣ ಜಗತ್ತಿನ ಸಮಸ್ತ ಸೃಷ್ಟಿಯ ಪಾಲಕನಾಗಿದ್ದಾನೆ ಎಂದು ಶ್ರೀರಕ್ಷಾ ವಿದ್ಯಾಮಂದಿರದ ಮುಖ್ಯಸ್ಥ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ನಗರದ ಮಾಣೀಕೇಶ್ವರಿ ಕಾಲೋನಿಯಲ್ಲಿ ಶ್ರೀರಕ್ಷಾ ವಿದ್ಯಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಕನಾಗಿದ್ದಾಗ ದೇವಾದಿದೇವ ಕೃಷ್ಣನು ತನ್ನ ತುಂಟತನದ ರೀತಿಯಲ್ಲಿಯೇ ಅನೇಕ ಲೋಕಕಲ್ಯಾಣದ ಪವಾಡಗಳನ್ನು ಮಾಡಿದವನಾಗಿದ್ದಾನೆ. ಜಗದೇಕ ಪಿತ, ಮಾಧವ, ಮುಕುಂದ, ಕೇಶವ ಹೀಗಾಗಿ ನೂರಾರು ನಾಮಗಳಿಂದ ಕರೆಸಿಕೊಳ್ಳುವ ನವನೀತ ಚೋರ ಶ್ರೀಕೃಷ್ಣನ ಮಹಿಮೆ ಅಪಾರವಾದುದ್ದು. ಇವತ್ತಿನ ದಿನ ದೇಶದಾದ್ಯಂತ ಜಾತಿಭೇದ, ಭಾಷೆ, ಪ್ರಾಂತ್ಯ, ಗಡಿ ಮೀರಿದ ಭಕ್ತಿ ಭಾವದಿಂದ ಕೃಷ್ಣನ ಭಜನೆ ಮಾಡುತ್ತಾರೆ ಎಂದರು.
ಗಮನ ಸೆಳೆದ ಚಿಕ್ಕ ಮಕ್ಕಳ ಛದ್ಮವೇಷ :ಶಾಲೆಯ ಹಲವಾರು ಮಕ್ಕಳು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಕೃಷ್ಣ, ರಾಧೆಯ ವೇಷ ಧರಿಸಿ ಶಾಲೆಗೆ ಆಗಮಿಸಿದ್ದರು. ಪುಟ್ಟ ಪುಟ್ಟ ಮಕ್ಕಳು ನಿವಿಲುಗರಿ, ಕಿರೀಟ, ಕೊಳಲು ಹಿಡಿದದು ಅಂಕು ಡೊಂಕಾದ ಹೆಜ್ಜೆಯನ್ನಾಕುತ್ತಾ ಅನೇಕ ಮಕ್ಕಳು ಸಾಕ್ಷಾತ್ ಬಾಲಕೃಷ್ಣನ ತದ್ರೂಪದಂತೆ ಕಂಡರು. ಚಿಣ್ಣರು ಅತ್ಯಂತ ಶ್ರದ್ಧೆಯಿಂದ ಕೃಷ್ಣರಾಧೆಯರ ವೇಷದಲ್ಲಿ ಕುಣಿದು ಕುಪ್ಪಳಿಸಿದರು. ಪೋಷಕರು ತಮ್ಮ ವೇಷಧಾರಿ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದರ ಮೂಲಕವಾಗಿ ಸಂಭ್ರಮಿಸಿದ್ದು ಕಂಡುಬಂದಿತು.
ಈ ಸಂದರ್ಭದಲ್ಲಿ ಅನೀಲ ದೇಶಪಾಂಡೆ, ರವೀಂದ್ರ ಕುಲಕರ್ಣಿ, ಶಂಕ್ರಪ್ಪ ಅರುಣಿ, ರಿಯಾಜ್ ಪಟೇಲ್, ಹಣಮಂತರೆಡ್ಡಿ, ಮಹೇಶಕುಮಾರ, ದೀಪಕ್ ಪೋದ್ದರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.