ಶಹಾಪುರ: ಸಂಕ್ರಾಂತಿ ಹಬ್ಬದಂದು ಸಗರನಾಡಿನ ಆರಾಧ್ಯ ದೈವ ಭೀಮರಾಯನಗುಡಿ ಹಾಗೂ ಸಂಗಮೇಶ್ವರ ದೇವರ ಜೋಡಿ ಪಲ್ಲಕ್ಕಿ ಉತ್ಸವವನ್ನು ತಾಲ್ಲೂಕು ಆಡಳಿತ ರದ್ದುಗೊಳಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ತಾಲ್ಲೂಕು ಆಡಳಿತದ ಈ ನಿರ್ಧಾರದಿಂದ ಭಕ್ತರಿಗೆ ಬೇಸರ ಮೂಡಿಸಿತ್ತು. ಕೋವಿಡ್ ಹಾವಳಿಯ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಜನರು ಪಾಲಿಸುವುದರ ಮೂಲಕ ತಾಳ್ಮೆ ಹಾಗೂ ಸಂಯಮ ಪ್ರದರ್ಶಿಸಿದ್ದಾರೆ. ಇದರಿಂದ ಪೊಲೀಸರು ಹಾಗೂ ತಾಲ್ಲೂಕು ಆಡಳಿತ ನಿಟ್ಟುಸಿರು ಬಿಟ್ಟಿದೆ.
ಹಬ್ಬದ ಪ್ರಯುಕ್ತ ಹಾಗೂ ಅಂಗಡಿ ಮುಂಗಟ್ಟು ಬಂದ್ ಆಗಿರುವುದು. ಅಲ್ಲದೆ ವಾಹನಗಳ ಓಡಾಟಕ್ಕೆ ಬ್ರೆಕ್ ಹಾಕಿದ್ದರಿಂದ ಗ್ರಾಮೀಣ ಪ್ರದೇಶದ ಜನರು ನಗರದ ಕಡೆ ಮುಖ ಮಾಡಲಿಲ್ಲ. ಪೊಲೀಸರು ಹಾಗೂ ನಗರಸಭೆಯ ಸಿಬ್ಬಂದಿ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದು ಕಂಡುಬಂತು.
‘ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾತ್ರಿ ಇಡೀ ಜೋಡು ಪಲ್ಲಕ್ಕಿ ಉತ್ಸವ ನೋಡಲು ಹಲವು ವರ್ಷದಿಂದ ನಗರಕ್ಕೆ ಆಗಮಿಸುತ್ತಿದ್ದೇವು. ಜಾತ್ರೆ ನಿರ್ಬಂಧಿಸಿದ್ದು ಹಾಗೂ ಸಂಚಾರಕ್ಕೂ ತೊಂದರೆ ಕೊಡುತ್ತಿರುವುದರಿಂದ ಗ್ರಾಮದಲ್ಲಿ ಉಳಿದುಕೊಂಡಿದ್ದೇವು. ಜಾತ್ರೆಯು ಯಾವ ವರ್ಷವು ರದ್ದಾಗಿರ ಲಿಲ್ಲ. ಈ ವರ್ಷ ರದ್ದಾಗಿದ್ದು ಬೇಸರ ಮೂಡಿಸಿದೆ. ಕೋವಿಡ್ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿರು ವುದರಿಂದ ಒಲ್ಲದ ಮನಸ್ಸಿನಿಂದಲೇ ಜಾತ್ರೆ ರದ್ದುಪಡಿಸಿರುವುದನ್ನು ಒಪ್ಪಿಕೊಳ್ಳುವಂತಾಗಿದೆ‘ ಎನ್ನುತ್ತಾರೆ ಭೀಮರಾಯನಗುಡಿ ಬಲಭೀಮೇಶ್ವರ ದೇವರ ಭಕ್ತ ಭೀಮರಾಯ.
ಉತ್ತಮ ಸ್ಪಂದನೆ
ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಸಾರ್ವ ಜನಿಕರು ಪಾಲಿಸುವುದರ ಜತೆಗೆ ಅನವಶ್ಯಕವಾಗಿ ಓಡಾಡು ವುದಕ್ಕೂ ಸ್ವಯಂ ನಿಯಂತ್ರಣ ಮಾಡಿಕೊಂಡಿದ್ದಾರೆ.
ಆದರೆ, ಮಾಸ್ಕ್ ಧರಿಸುವುದಕ್ಕೆ ಇನ್ನು ಸಿದ್ಧರಿಲ್ಲ. ಅಂತವರಿಗೆ ಅನಿವಾರ್ಯವಾಗಿ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಅಲ್ಲಾಪುರೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.