ಯಾದಗಿರಿ: ‘ಜಿಲ್ಲೆಯಾದ್ಯಂತ ಮಳೆ ಕೊರತೆಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಭತ್ತ ಬಿತ್ತನೆ ನಿಷೇಧಿಸಲಾಗಿದೆ. ಹೀಗಾಗಿ ರೈತರು ಭತ್ತಕ್ಕೆ ಪರ್ಯಾಯವಾಗಿ ಇತರ ಬೆಳೆಗಳನ್ನು ಬೆಳೆಯಬೇಕು’ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳಸಲಹೆ ನೀಡಿದರು.
ಸುರಪುರ ತಾಲ್ಲೂಕಿನ ಗೂಗಲಗಟ್ಟಿ ಗ್ರಾಮದಲ್ಲಿ ಈಚೆಗೆ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಭತ್ತಕ್ಕೆ ಪರ್ಯಾಯ ಬೆಳೆಗಳು ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಭತ್ತದ ಗದ್ದೆಗಳಲ್ಲಿ ಭತ್ತ ಕಟಾವು ಮಾಡುವ 10 ದಿನ ಮುಂಚಿತವಾಗಿ ಸಾಸಿವೆ ಬಿತ್ತನೆ ಮಾಡಿ, ಗದ್ದೆಗಳಲ್ಲಿ ಉಳಿದಿರುವ ತೇವಾಂಶದಿಂದಲೆ ಸಾಸಿವೆ ಬೆಳೆಯಬಹುದಾಗಿದೆ. ರೈತರು ಗುಳೆ ಹೋಗುವುದನ್ನು ತಡೆಯಲು ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೊಳವೆಬಾವಿ ಅಥವಾ ಬಾವಿ ಮತ್ತು ಹಳ್ಳಗಳಿಂದ ನೀರಾವರಿ ವ್ಯವಸ್ಥೆ ಹೊಂದಿರುವವರು ಕಡಲೆ, ಸೂರ್ಯಕಾಂತಿ, ಸಜ್ಜೆ, ಹೈಬ್ರಿಡ್ ಜೋಳ, ಗೋವಿನ ಜೋಳ, ಅಲಸಂದಿ, ಹೆಸರು, ಉದ್ದು ಮತ್ತು ಶೇಂಗಾ ಬೆಳೆಯಬಹುದು. ತುಂತುರು ಅಥವಾ ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆದರೆ ಶೇ 40ರಿಂದ 50ರಷ್ಟು ನೀರು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ ಹೊಲಗಳನ್ನು ಪಾಳು ಬಿಡದೆ ಬೆಳೆ ಬೆಳೆಯುವುದರಿಂದ ಜನರಿಗೆ ಕೆಲಸ ಸಿಗುವುದು ಹಾಗೂ ರೈತರು ಗುಳೆ ಹೋಗುವುದನ್ನು ತಡೆಯಬಹುದಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ( 98453 64708)ವನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಬೇಸಾಯ ಶಾಸ್ತ್ರಜ್ಞ ಡಾ.ರವಿಕಿರಣ ಅವರು ಬೆಳೆಗಳಲ್ಲಿ ಕಳೆನಾಶಕಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ಸುತ್ತಮುತ್ತಲಿನ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.