ಶಹಾಪುರ: ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ಮಂಗಳವಾರ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಬಾಲಕಿ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಳು. ಬೆಳಿಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಆಕೆಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ತರುತ್ತಿದ್ದಾಗ ಮೃತಪಟ್ಟಿದ್ದಾಳೆ.
ಬಾಲಕಿಯ ಶವವನ್ನು ಆಂಬುಲೆನ್ಸ್ನಲ್ಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ವೈದ್ಯರ ಸಮಕ್ಷಮದಲ್ಲಿ ಐದು ಅಡಿ ಆಳದ ಗುಂಡಿ ತೋಡಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ಪೋಷಕರು ಮತ್ತು ಕುಟುಂಬ ಸದಸ್ಯರಿಗೆ ಅವಕಾಶ ನೀಡಿಲ್ಲ.
ಕೂಲಿ ಕೆಲಸಕ್ಕೆ ಗ್ರಾಮದ ರಾಮಣ್ಣ ಹೊಸ್ಮನಿ ಅವರ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಕೊರೊನಾ ಭೀತಿಯಿಂದ ವಾರದ ಹಿಂದೆ ಅವರು ಗ್ರಾಮಕ್ಕೆ ವಾಪಸಾಗಿದ್ದರು.
‘ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ರಕ್ತದ ಮಾದರಿಯನ್ನು ತೆಗೆದುಕೊಂಡು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿರುವ ಕೊರೊನಾ ಟೆಸ್ಟಿಂಗ್ ಲ್ಯಾಬ್ಗೆ ಕಳುಹಿಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ‘ ಎಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿ ತಿಳಿಸಿದರು.
‘ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ತಾಲ್ಲೂಕಿನ ಭೀಮರಾಮರಾಯನಗುಡಿ ಜ್ವರ ತಪಾಸಣೆಯ ಕೇಂದ್ರಕ್ಕೆ ತೆರಳಿ ನಾವೆಲ್ಲರೂ ತಪಾಸಣೆ ಮಾಡಿಕೊಂಡಿದ್ದೇವೆ. ವೈದ್ಯರ ನಿರ್ದೇಶನದಂತೆ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಪ್ರತಿ ದಿನ ಆಶಾ ಕಾರ್ಯಕರ್ತರು ಬಂದು ತಪಾಸಣೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಇದ್ದಾಗ ಮಗುವಿಗೆ ಕಾಮಾಲೆ ಕಾಣಿಸಿಕೊಂಡಿತ್ತು. ನಮಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿರಲಿಲ್ಲ’ ಎಂದು ಪಾಲಕರು ಹೇಳಿದ್ದಾರೆ.
ಕೊರೊನಾದಿಂದ ಬಾಲಕಿ ಮೃತಪಟ್ಟಿದ್ದಾಳೆ ಎಂಬ ವದಂತಿ ಗ್ರಾಮದಲ್ಲಿ ಹರಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.