ಯಾದಗಿರಿ: 1995ರ ನಂತರ ಪ್ರಾರಂಭವಾದ ಖಾಸಗಿ ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ ಹಾಗೂ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಂಘದ ಗೌರವಾಧ್ಯಕ್ಷ ಗುರುಮಠಕಲ್ ಖಾಸಾಮಠದ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಎನ್.ಪಿ.ಎಸ್ ರದ್ದು ಮಾಡಬೇಕು.ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿ ಮಾಡಬೇಕು. ಜ್ಯೋತಿ ಸಂಜೀವಿನಿ ಅನುದಾನಿತ ಶಾಲಾ ಸಿಬ್ಬಂದಿಗಳಿಗೆ ವಿಸ್ತರಿಸಬೇಕು. ಬೋಧಕ ಮತ್ತು ಬೋಧಕೇತರ ಖಾಲಿ ಹುದ್ದೆಗಳ ಭರ್ತಿಗೆ ವಿಧಿಸಿದ ಆರ್ಥಿಕ ಮಿತವ್ಯಯ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ರೂರಲ್ ಡೆವಲಪ್ಮೆಂಟ್ ಬೋರ್ಡ್ ವತಿಯಿಂದ ಖಾಸಗಿ ಶಾಲಾ ಕಾಲೇಜುಗಳಿಗೆ ಕಟ್ಟಡ, ಕಂಪೌಂಡ್, ಶೌಚಾಲಯ, ವಿವಿಧ ಮೂಲಭೂತ ಸೌಕರ್ಯಕ್ಕಾಗಿ ಅನುದಾನ ಒದಗಿಸಬೇಕು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲಾ ಕಾಲೇಜುಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಕಂಪೌಂಡ್ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಿ ರಾಜ್ಯ ಎಲ್ಲಾ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಬೇಕು. ಆರ್ಟಿಇ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಮೂಲಕ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಕಳಿಸಲಾಯಿತು.
ಖಜಾಂಚಿ ಸಾಯಿಬಣ್ಣ ಬಸವಂತಪುರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗುಡಿಮನಿ, ಶಹಾಪುರ ತಾಲ್ಲೂಕು ಅಧ್ಯಕ್ಷ ಆರ್.ಚನ್ನಬಸವ, ಉಪಾಧ್ಯಕ್ಷ ಮಹಾಲಕ್ಷ್ಮಿ ಪಾಟೀಲ, ಕಾನೂನು ಸಲಹೆಗಾರ ನಾಗಪ್ಪ, ಕಾರ್ಯದರ್ಶಿ ಅಶೋಕ ಘನಾತೆ, ಆನಂದ ಕಾಡ್ಲೂರು, ಮಹಿಬೂಬಸಾಬ, ಕೃಷ್ಣಮೂರ್ತಿ ಕುಲಕರ್ಣಿ, ಮಲ್ಲು ಮೇಟಿ, ಸುಭಾಷ ಆಲಿಯಾಳ, ಶಿವರಾಜ ಪಾಟೀಲ, ಲಂಕೆಪ್ಪ ಕಾವಲಿ, ಮೂರ್ತಿ ಮುದಗಲ್, ಶರಣಗೌಡ, ರಾಮು ಸಗರ, ಆಸೀನಾ ಬಾನು, ಮಲ್ಲು ಮೇಸ್ತ್ರಿ, ಬಾಬು ನಾಯಕ, ಭೀಮರಾಯ, ಹೊನ್ನಪ್ಪ ಗಂಗನಾಳ, ಅಶೋಕ ಜಾಧವ್, ಶಂಕರ ಸೋನಾರ ಇದ್ದರು.
***
ಸರ್ಕಾರ ಖಾಸಗಿ ಶಾಲೆಯ ಶಿಕ್ಷಕರಿಗೆ ಸ್ಪಂದಿಸದೇ ಇರುವುದು ಅತ್ಯಂತ ನೋವಿನ ಸಂಗತಿ.ನಮ್ಮ ಪರಿಸ್ಥಿತಿ ಶೋಚನೀಯವಾಗಿದೆ.
– ವಿಜಯ ರಾಠೋಡ, ಜಿಲ್ಲಾ ಘಟಕದ ಅಧ್ಯಕ್ಷ,ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.