ADVERTISEMENT

ಸ್ಕೀಜೋಫ್ರೀನಿಯಾ ತೀವ್ರ ಮಾನಸಿಕ ಕಾಯಿಲೆ

ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕಿಂತ ಹೆಚ್ಚು ಜನರಲ್ಲಿ ಕಾಣುವ ಕಾಯಿಲೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 14:30 IST
Last Updated 24 ಮೇ 2019, 14:30 IST
ಯಾದಗಿರಿಯ ಶಾರದಾ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಸ್ಕೀಜೋಫ್ರೇನಿಯಾ ದಿನ’ ಕಾರ್ಯಕ್ರಮವನ್ನು ಜಿಲ್ಲಾ ಎಸ್‌ಪಿ ರಿಷಿಕೇಶ ಭಗವಾನ ಸೋನಾವಣೆ ಉದ್ಘಾಟಿಸಿ ಮಾತನಾಡಿದರು
ಯಾದಗಿರಿಯ ಶಾರದಾ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಸ್ಕೀಜೋಫ್ರೇನಿಯಾ ದಿನ’ ಕಾರ್ಯಕ್ರಮವನ್ನು ಜಿಲ್ಲಾ ಎಸ್‌ಪಿ ರಿಷಿಕೇಶ ಭಗವಾನ ಸೋನಾವಣೆ ಉದ್ಘಾಟಿಸಿ ಮಾತನಾಡಿದರು   

ಯಾದಗಿರಿ: ಸ್ಕೀಜೋಫ್ರೀನಿಯಾ ತೀವ್ರವಾದ ಮಾನಸಿಕ ಕಾಯಿಲೆಯಾಗಿದ್ದು, ಇದು ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕಿಂತ ಹೆಚ್ಚು ಜನರಲ್ಲಿ ಕಂಡುಬರುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ ತಿಳಿಸಿದರು.

ನಗರದ ಶಾರದಾ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ವಿಭಾಗ) ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಸ್ಕೀಜೋಫ್ರೇನಿಯಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಕಾರಣವಿಲ್ಲದೆ ಇತರರು ತನಗೆ ತೊಂದರೆ ಕೊಡುತ್ತಾರೆ ಎಂದು ಭಾವಿಸುವುದು, ತನ್ನಷ್ಟಕ್ಕೆ ತಾನೇ ನಗುವುದು, ಅಳುವುದು, ಮಾತನಾಡುವುದು, ಇಲ್ಲದ ಧ್ವನಿ ಕೇಳುವಂತಾಗುವುದು, ಇಲ್ಲದ ವಸ್ತು ನೋಡಿದಂತಾಗುವುದು ಈ ರೋಗದ ಲಕ್ಷಣಗಳಾಗಿವೆ ಎಂದು ವಿವರಿಸಿದರು.

ADVERTISEMENT

ಇಂತಹ ರೋಗಿಗಳಿಗೆ ಕುಟುಂಬದ ಸಹಕಾರ, ಪ್ರೀತಿ, ವಿಶ್ವಾಸದಿಂದ ಬೇಗ ಗುಣಪಡಿಸಬಹುದು. ಮನೋಸಾಮಾಜಿಕ ಸಮಾಲೋಚನಾ ಚಿಕಿತ್ಸೆಗಳು, ಪುನರ್ವಸತಿ, ವೈಯಕ್ತಿಕ ಮತ್ತು ಕುಟುಂಬ ಥೆರಪಿ ಚಿಕಿತ್ಸೆಯ ಮೂಲಕ ರೋಗ ನಿಯಂತ್ರಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಭಗವಾನ ಸೋನಾವಣೆ, ಸ್ಕೀಜೋಫ್ರೇನಿಯಾ ರೋಗವು ವ್ಯಕ್ತಿಯ ಮಾನಸಿಕ ಆರೋಗ್ಯ ಕುಗ್ಗಿಸುತ್ತದೆ. ಪ್ರಾಥಮಿಕ ಹಂತದಲ್ಲೇ ರೋಗದ ಲಕ್ಷಣಗಳನ್ನು ಗುರುತಿಸಿ, ಚಿಕಿತ್ಸೆ ನೀಡಿದಲ್ಲಿ ಬೇಗ ಗುಣಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಇಂತಹ ದಿನಾಚರಣೆಗಳ ಮೂಲಕ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, ಸ್ಕೀಜೋಫ್ರೇನಿಯಾ ರೋಗದ ಲಕ್ಷಣಗಳ ಬಗ್ಗೆ ಅರಿವು ಮತ್ತು ಅಗತ್ಯವಾದ ಚಿಕಿತ್ಸೆಯನ್ನು ನೀಡುವುದರಿಂದ ರೋಗವನ್ನು ತಡೆಗಟ್ಟಬಹುದು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕಾರ್ಯಕ್ರಮದಡಿ ಒಂದನೇ ಮಂಗಳವಾರ ಶಹಾಪುರ, ಎರಡನೇ ಮಂಗಳವಾರ ಸುರಪುರ, ಮೂರನೇ ಮಂಗಳವಾರ ಗುರುಮಠಕಲ್, ನಾಲ್ಕನೇ ಮಂಗಳವಾರ ಹುಣಸಗಿ, ಒಂದನೇ ಶುಕ್ರವಾರ ವಡಗೇರಾ ಮತ್ತು ಪ್ರತಿದಿನ ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರಿಂದ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಮನೋವೈದ್ಯ ಡಾ.ಉಮೇಶ ಮಾತನಾಡಿದರು. ಈ ಸಂದರ್ಭದಲ್ಲಿ ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾರದಾ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಕ್ಸ್‌ಫರ್ಡ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಇದಕ್ಕೂ ಮೊದಲು ನಗರದ ಹಳೆ ಪ್ರವಾಸಿ ಮಂದಿರದಿಂದ ಶಾರದಾ ಆಯುರ್ವೇದ ಕಾಲೇಜಿನವರೆಗೆ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹಬೀಬ ಉಸ್ಮಾನ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಹುಲ್ ಕುಲಕರ್ಣಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಲಕ್ಷ್ಮಿಕಾಂತ ಇದ್ದರು.

ಆರೋಗ್ಯ ಮೇಲ್ವಿಚಾರಕ ಶರಣಬಸವ ಹೊಸಮನಿ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲ್‌ರಡ್ಡಿ ನಿರೂಪಿಸಿದರು.

ಈ ರೋಗವು ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ರೋಗಿಯ ಆಲೋಚನೆ, ನಡವಳಿಕೆ, ಭಾವನೆಗಳಲ್ಲಿ ಏರುಪೇರಾಗುತ್ತದೆ
ರಿಷಿಕೇಶ ಭಗವಾನ ಸೋನವಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.