ADVERTISEMENT

ಯಾದಗಿರಿ | ಜಿಲ್ಲೆಯಾದ್ಯಂತ ಸರಳ ಬಕ್ರೀದ್‌ ಆಚರಣೆ

ಕೊರೊನಾ ನಿವಾರಣೆಗೆ ನಮಾಜ್‌, ಮಸೀದಿಗಳಲ್ಲಿ ಸ್ಯಾನಿಟೈಸ್, ಥರ್ಮಲ್ ಸ್ಕ್ರಿನಿಂಗ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:15 IST
Last Updated 1 ಆಗಸ್ಟ್ 2020, 16:15 IST
ಯಾದಗಿರಿಯ ಸದರ್ ದರ್ವಾಜಾ ಮಸೀದಿಯಲ್ಲಿ ಶನಿವಾರ ಬಕ್ರೀದ್‌ ನಮಾಜ್‌ ಸಲ್ಲಿಸಲಾಯಿತು
ಯಾದಗಿರಿಯ ಸದರ್ ದರ್ವಾಜಾ ಮಸೀದಿಯಲ್ಲಿ ಶನಿವಾರ ಬಕ್ರೀದ್‌ ನಮಾಜ್‌ ಸಲ್ಲಿಸಲಾಯಿತು   

ಯಾದಗಿರಿ: ಕೊರೊನಾ ಸೋಂಕಿನ ಭೀತಿನ ನಡುವೆಯೂ ಜಿಲ್ಲಾಯಾದ್ಯಂತ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್‌ಹಬ್ಬವನ್ನು ಶನಿವಾರ ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಮೊದಲೇ ನಿರ್ದೇಶಿಸಿದಂತೆ ಈದ್ಗಾ ಮೈದಾನಗಳಲ್ಲಿ ಜನರು ಸೇರಲಿಲ್ಲ. ಮಸೀದಿಗಳಲ್ಲಿ ಎರಡ್ಮೂರು ತಂಡಗಳಾಗಿ ಬಂದು ನಮಾಜ್‌ ಮಾಡಿದರು.

ನಗರದ ಪ್ರಮುಖ ಮಸೀದಿಗಳಲ್ಲಿ ಥರ್ಮಲ್ ಸ್ಕ್ರಿನಿಂಗ್‌ ಮಾಡಲು ಒಬ್ಬರನ್ನು ನೇಮಕ ಮಾಡಲಾಗಿತ್ತು. ಅಲ್ಲದೆ ಸ್ವಯಂ ಚಾಲಿತ ಸ್ಯಾನಿಟೈಸ್ ದ್ರಾವಣ ಸಿಂಪಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ಬೆಳಿಗ್ಗೆ 6 ಗಂಟೆಯಿಂದ 7.30ರ ತನಕ ಮೂರು ತಂಡಗಳಾಗಿ ಬಂದು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೈಕ್‌ ಮೂಲಕ ಅಂತರ ಕಾಪಾಡಿಕೊಳ್ಳಲು, ಗುಂಪು ಗೂಡದಂತೆ ಆಗಾಗ ಮೌಲ್ವಿಯವರು ಎಚ್ಚರಿಸುತ್ತಿದ್ದರು.

ಕೊರೊನಾ ನಿವಾರಣೆಗೆ ವಿಶೇಷ ಪ್ರಾರ್ಥನೆ:

ADVERTISEMENT

‘ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಆಚರಿಸುವುದರ ಜೊತೆಗೆ ಮಸೀದಿಗಳಲ್ಲಿ ಕೊರೊನಾ ನಿವಾರಣೆಗೆ ನಮಾಜ್‌ ಸಲ್ಲಿಸಿದ್ದಾರೆ. ಇದಕ್ಕಾಗಿಯೇ ಸಮಯ ಮೀಸಲಿಟ್ಟು, ಈ ವೈರಸ್‌ಗೆ ಸಂಬಂಧಿಸಿದಂತೆ ಔಷಧಿ ಶೀಘ್ರ ಲಭ್ಯವಾಗಲಿ. ಜನತೆ ಸುಖ, ಸಮಾಧಾನದಿಂದ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಮೌಲ್ವಿ ಮೌಲಾಲ ನಿಜಾಮುದ್ದೀನ್ ಬರ್ಕಾತಿ ತಿಳಿಸಿದರು.

‘ಕೊರೊನಾ ಸೋಂಕು ಬಂದು ಹಬ್ಬದ ಸಂಭ್ರಮವನ್ನೆ ಕಸಿದುಕೊಂಡಿದೆ. ಚಿಕ್ಕಮಕ್ಕಳು ಮಾತ್ರ ಹೊಸ ಉಡುಗೆತೊಟ್ಟು ಸಂಭ್ರಮಿಸಿದ್ದಾರೆ. ಬೇರೆ ಊರಿನಿಂದ ಬಂಧುಗಳನ್ನು ಹಬ್ಬಕ್ಕೆ ಆಹ್ವಾನಿಸಿಲ್ಲ. ದೂರದಿಂದಲೇ ಶುಭಾಶಯ ವಿನಿಮಯ ಮಾಡಿಕೊಂಡಿದ್ದೇವೆ. ಆಲಿಂಗನವಿಲ್ಲ. ಕೈ ಕುಲುಕಲು ಅವಕಾಶವಿಲ್ಲ. ಹೀಗಾಗಿ ಸರಳವಾಗಿ ಹಬ್ಬವನ್ನು ಆಚರಿಸಿದ್ದೇವೆ’ ಎಂದು ಸೈಯದ್‌ ಸಜೀದ್‌ ಹೈಯಾತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.