ಯಾದಗಿರಿ: ಜಿಲ್ಲೆಯಲ್ಲಿ ಮೇ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರೈತರು ಹೆಸರು ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಬೇರೆ ಬೆಳೆ ಬಿತ್ತನೆಗೆ ಭೂಮಿಹದಗೊಳಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದೆ. ಜೂನ್ 1ರಿಂದಲೇ ಮಳೆ ಆರಂಭವಾಗಿದ್ದು, ರೈತರು ಹರ್ಷಗೊಂಡಿದ್ದಾರೆ. ಹೀಗಾಗಿ ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ 836 ಮಿ.ಮೀ. ವಾಡಿಕೆ ಮಳೆಯ ಪ್ರಮಾಣ ಇದೆ.ಭತ್ತ, ಹೆಸರು, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಜಿಲ್ಲೆಯ ಪ್ರಮುಖ ಬೆಳೆಗಳು.
ಜಿಲ್ಲೆಯು ಭೌಗೋಳಿಕವಾಗಿ 5,16,088 ಹೆಕ್ಟೇರ್ ಪ್ರದೇಶ ಹೊಂದಿದೆ. ಒಟ್ಟು 4,42,272 ಹೆಕ್ಟೇರ್ ಸಾಗುವಳಿ ವಿಸ್ತೀರ್ಣ ಹೊಂದಿದೆ.ಜಿಲ್ಲೆಯಲ್ಲಿ 14 ಕೃಷಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಣೆ ಮಾಡುತ್ತಿದೆ.
ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆಪೂರ್ವ ಚಟುವಟಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರದ ಗುರಿಗೆ ಪೂರಕವಾಗಿ 25,383 ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯವಿದೆ.
‘ರೈತ ಸಂಪರ್ಕ ಕೇಂದ್ರಗಳಲ್ಲಿ 510 ಕ್ವಿಂಟಲ್ ತೊಗರಿ, 150 ಕ್ವಿಂಟಲ್ ಹೆಸರು, 35 ಕ್ವಿಂಟಲ್ ಭತ್ತ (ಯಾದಗಿರಿ ತಾಲ್ಲೂಕು ಮಾತ್ರ), 12.60 ಕ್ವಿಂಟಲ್ ಸಜ್ಜೆ, 4 ಕ್ವಿಂಟಲ್ ಸೂರ್ಯಕಾಂತಿ, 2.30 ಕ್ವಿಂಟಲ್ ಮೆಕ್ಕೆಜೋಳ, 15 ಕ್ವಿಂಟಲ್ ಉದ್ದು ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ವಿತರಣೆ ಜಾರಿಯಲ್ಲಿದೆ. ಈಗಾಗಲೇ 200 ಕ್ವಿಂಟಲ್ ಹೆಸರು ವಿತರಿಸಲಾಗಿದೆಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಅವರು.
‘ಜಿಲ್ಲೆಯಲ್ಲಿ 22,500 ಮೆಟ್ರಿಕ್ ಟನ್ ಯೂರಿಯಾ, 13,920 ಮೆ.ಟನ್ ಡಿಎಪಿ, 5266 ಮೆ.ಟನ್ ಕಾಂಪ್ಲೆಕ್ಸ್, 820 ಮೆ.ಟನ್ ಎಂ.ಓ.ಪಿ, 4204 ಮೆ.ಟನ್ ಎಸ್ಎಸ್ಪಿ, 841 ಮೆ.ಟನ್ ಮಿಕ್ಸ್ಚರ್ಸ್ ರಸಗೊಬ್ಬರಗಳ ದಾಸ್ತಾನು ಇರುವುದಾಗಿ’ ತಿಳಿಸಿದ್ದಾರೆ.
***
ರೈತರು ಅಧಿಕೃತ ಬೀಜ ಮಾರಾಟಗಾರರಿಂದ ಮಾತ್ರ ಖರೀದಿಸಿ. ಬಿಡಿಯಾಗಿ ಸಿಗುವ ಬೀಜ ಖರೀದಿಸಬೇಡಿ. ಈ ಬಾರಿ 25 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತನೆ ಗುರಿ ಇದೆ
ಆರ್.ದೇವಿಕಾ, ಜಂಟಿ ಕೃಷಿ ನಿರ್ದೇಶಕಿ
***
ಮಳೆ ಚೆನ್ನಾಗಿ ಬಂದಿದ್ದರಿಂದ ಹೆಸರು ಬಿತ್ತನೆ ಮಾಡಿದ್ದೇವೆ. ಬೇಗ ಬಿತ್ತನೆ ಮಾಡುವುದರಿಂದ ಹಿಂಗಾರು ಬೆಳೆಗೂ ಅನುಕೂಲವಾಗುತ್ತದೆ
ಲಕ್ಷ್ಮಣ ಈಡಿ,ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.