ಹುಣಸಗಿ: ಹಣಕಾಸು ವಲಯ, ರೈಲ್ವೆ, ವಿಮಾನಯಾನ, ಆರೋಗ್ಯ, ದೂರ ಸಂಪರ್ಕ ಸೇರಿದಂತೆ ಇತರ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಕಾರ್ಮಿಕ ಸಂಘಟನೆಯ ಪ್ರಮುಖ ಬಸವರಾಜ ಕಟ್ಟಿಮನಿ ಖಂಡಿಸಿದರು.
ಈ ಕುರಿತು ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ನೂರಾರು ಕಾರ್ಮಿಕರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಬಸಲಿಂಗಮ್ಮ ಗುಂಡಲಗೇರಾ ಮಾತನಾಡಿ, ಅಂಗನವಾಡಿ, ಪಂಚಾಯಿತಿ ಬಿಸಿ ಊಟ, ಆಶಾ ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಅವರಿಗೆ ಕೆಲಸಕ್ಕೆ ತಕ್ಕಂತೆ ಸರ್ಕಾರ ವೇತನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರುದ್ರಣ್ಣ ಮೇಟಿ ಮಾತನಾಡಿ, ಕೊರೊನಾ ಹಾವಳಿ, ಸತತ ಮಳೆ, ನೆರೆಹಾವಳಿಯಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಯ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿಯಡಿ ಕಾರ್ಮಿಕರಿಗೆ ದಿನಕ್ಕೆ ₹600 ಕೂಲಿ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾದೇವಿ ಬೇವಿನಾಳ ಮಠ, ಗಂಗಣ್ಣ ಚಲುವಾದಿ, ಮಲ್ಲಮ್ಮ ಗಡದ, ಶರೀಫಸಾಬ ಬೋನಾಳ, ನಸೀಮಾ ಮುದನೂರ, ಶಾಂಭವಿ ರಾಜವಾಳ ತಾಂಡಾ, ಭೀಮಭಾಯಿ ನಾರಾಯಣಪೂರ, ಯಲ್ಲಪ್ಪ ದೇವಪುರ, ಖಾಜೇಸಾಬ ದಳಪತಿ, ಶರಣಪ್ಪ ಜಂಬಲದಿನ್ನಿ, ರಾಜು ಗೋನಾಳ, ಬಾಬು ಪೂಜಾರಿ, ಹುಸನಪ್ಪ ಬಾಚಿಮಟ್ಟಿ, ರಮಜಾನಸಾಬ, ಮಡಿವಾಳಪ್ಪ ಮಡಿವಾಳ, ರವಿಶಂಕರ ಕೊಡೇಕಲ್ಲ, ಯಲ್ಲಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.