ADVERTISEMENT

ಯರಗೋಳ ದೊಡ್ಡ ಕೆರೆ ನೀರು ಸೋರಿಕೆ

ನೀರು ಸೋರಿಕೆ ತಡೆಯಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 2:12 IST
Last Updated 23 ಸೆಪ್ಟೆಂಬರ್ 2020, 2:12 IST
ಯರಗೋಳ ದೊಡ್ಡ ಕೆರೆಯ ಸಣ್ಣ ತುಂಬಿನಿಂದ ನೀರು ಸೋರಿಕೆಯಾಗುತ್ತಿದೆ
ಯರಗೋಳ ದೊಡ್ಡ ಕೆರೆಯ ಸಣ್ಣ ತುಂಬಿನಿಂದ ನೀರು ಸೋರಿಕೆಯಾಗುತ್ತಿದೆ   

ಯರಗೋಳ: ಗ್ರಾಮದ ದೊಡ್ಡ ಕೆರೆಯ ಸಣ್ಣ ತುಂಬಿನಿಂದ ನೀರು ಸೋರಿಕೆಯಾಗುತ್ತಿದೆ. ಇದರಿಂದ ಕೆರೆ ಭರ್ತಿಯ ಸಂತಸದಲ್ಲಿರುವ ರೈತರಿಗೆ ಆತಂಕ ಸೃಷ್ಟಿಯಾಗಿದೆ.

ಕೆಲವು ದಿನಗಳಿಂದ ಸತತವಾಗಿ ಸುರಿದ ಭಾರಿ ಮಳೆಯಿಂದ ಗ್ರಾಮದ ದೊಡ್ಡ ಕೆರೆಯಲ್ಲಿ ನೀರು ಸಂಗ್ರವಾಗಿದ್ದು, ಪೂರ್ಣ ಪ್ರಮಾಣದ ಕೆರೆ ತುಂಬಲು ಕ್ಷಣಗಣನೆ ಆರಂಭವಾಗಿದೆ. ಆದರೆ, ಗವಿಸಿದ್ದಲಿಂಗೇಶ್ವರ ಮಠದ ಮುಂಭಾಗದಲ್ಲಿರುವ ಕೆರೆಯ ಸಣ್ಣ ತುಂಬಿನಿಂದ ನೀರು ಸೋರಿಕೆಯಾಗಿ ಅನವ್ಯಶಕವಾಗಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ.

ರೈತರು ಭತ್ತ ನಾಟಿ ಮಾಡಲು ಇನ್ನೂ ಕೆಲವು ದಿನಗಳ ಸಮಯವಿದ್ದು, ಸಣ್ಣ ನೀರಾವರಿ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ನೀರು ಸೋರಿಕೆಯನ್ನು ತಡೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂರು ದಿನಗಳ ಹಿಂದೆ ಕೋಡಿಹಳ್ಳದಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ಮಣ್ಣು, ಮುಳ್ಳು ಕಂಟೆಗಳನ್ನು ಜೆಸಿಬಿ ಮತ್ತು ಟ್ಯ್ರಾಕ್ಟರ್ ಸಹಾಯದಿಂದ ಸ್ವಚ್ಛಗೊಳಿಸಿದ್ದಾರೆ. ಇದರಿಂದ ಮುಂದೆ ಕೆರೆಯ ನೀರು ಸರಾಗವಾಗಿ ಭತ್ತದ ಗದ್ದೆಗಳಿಗೆ ಹರಿಯಲು ಅನುಕೂಲವಾಗುತ್ತದೆ.

ಭಾರತೀಯ ಜೈನ ಸಂಘ ಮತ್ತು ಸಣ್ಣ ನೀರಾವರಿ ಇಲಾಖೆ ಜಂಟಿಯಾಗಿ ಬೇಸಿಗೆ ಸಮಯದಲ್ಲಿ ಸಣ್ಣ ಹಳ್ಳಗಳಲ್ಲಿ ಸಂಗ್ರಹಗೊಂಡಿದ್ದ ಹೂಳು ತೆಗೆದು ಸ್ವಚ್ಛಗೊಳಿಸಿವೆ. ಮಳೆಯ ನೀರು ಸರಾಗವಾಗಿ ದೊಡ್ಡ ಕೆರೆಗೆ ಹರಿದು ಬರುವಂತೆ ಮಾಡಿದ್ದರಿಂದ ಕೆರೆ ತುಂಬಲು ಸಹಾಯವಾಗಿದೆ.

ಕೆರೆ ತುಂಬಲು ಕೆಲವು ಅಡಿಗಳಷ್ಟು ನೀರು ಅವಶ್ಯಕತೆ ಇದ್ದು, ಹೆಸರು ಬೆಳೆಯ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ, ಕೆರೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಒಂದಿಷ್ಟು ಸಂತಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.