ಯಾದಗಿರಿ: ‘ಜಿಲ್ಲೆಯ ಮೇರು ಸಾಹಿತಿಯಾಗಿದ್ದ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಅಗಲಿಕೆ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಶೂನ್ಯಭಾವ ಆವರಿಸಿದೆ’ ಎಂದು ಸಾಹಿತಿ ಸಿದ್ಧರಾಮ ಹೊನ್ಕಲ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೂಮಿಗೆ ಬಂದವರೆಲ್ಲ ಒಂದು ದಿನ ಹೋಗಲೇಬೇಕು. ಆದರೆ, ಕರದಳ್ಳಿಯವರ ಅಕಾಲಿಕ ಸಾವು ನಾಡಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಶಹಾಪುರದ ಸಾಹಿತ್ಯ ವಲಯದಲ್ಲಿ ನಾವಿಬ್ಬರೂ ಒಡನಾಡಿಯಾಗಿದ್ದೇವು’ ಎಂದು ನೆನಪಿಸಿಕೊಂಡರು.
ಅಯ್ಯಣ್ಣ ಹುಂಡೇಕಾರ ಮಾತನಾಡಿ, ‘ಹುಟ್ಟು, ಸಾವಿನ ಮಧ್ಯೆ ಮನುಷ್ಯನ ಸಾಧನೆ ವ್ಯಕ್ತಿಯನ್ನು ಶಾಶ್ವತವಾಗಿಸುತ್ತದೆ. ಸ್ವಾರ್ಥಕ್ಕಾಗಿ ಸತ್ತವರು ನೆನಪಿನಿಂದ ಅಳೆಯುತ್ತಾರೆ. ದೇಶಕ್ಕಾಗಿ ಸತ್ತವರು ಸಾಹಿತ್ಯಕವಾಗಿ ಕೊಡುಗೆ ಕೊಟ್ಟವರು ಅಮರರಾಗುತ್ತಾರೆ. ಅಂಥವರ ಸಾಲಿಗೆ ಕರದಳ್ಳಿಯವರು ಸೇರುತ್ತಾರೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿಯನ್ನು ಗುರುತಿಸಿ ಅವರನ್ನು ಜಿಲ್ಲಾ ಸಮ್ಮೇಳನಾಧ್ಯಕ್ಷರನ್ನಾಗಿಸಿದ ಸಾರ್ಥಕತೆ ಭಾವ ನನಗಿದೆ’ ಎಂದು ನೆನಪಿಸಿಕೊಂಡರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ನುಡಿ ನಮನ ಸಲ್ಲಿಸಿದರು. ಡಾ.ಜ್ಯೋತಿ ಲತಾ ತಡಿಬಿಡಿಮಠ, ಕೊಟ್ರೇಶ ಹಿರೇಮಠ, ಸಾಹಿತಿ ಶೋಭಾ ಸಾಲಮಂಟಪಿ ಮಾತನಾಡಿದರು.
ಕಾಂಗ್ರೆಸ್ ಯುವ ಮುಖಂಡ ಮಾಣಿಕರೆಡ್ಡಿ ಕುರುಕುಂದಿ ಮಾತನಾಡಿ, ಸಾಹಿತ್ಯಕವಾಗಿ ಮೇರು ವ್ಯಕ್ತಿತ್ವ. ಆದರೆ, ಸರಳಜೀವಿ ಅವರ ಸಾಹಿತ್ಯಿಕ ಆದರ್ಶಗಳನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಬಸವರಾಜ ಅರಳಿ ಮೋಟನಹಳ್ಳಿ, ಮಾಣಿಕರೆಡ್ಡಿ ಕುರುಕುಂದಿ, ಸಿ.ಎಂ.ಪಟ್ಟೆದಾರ, ಡಾ.ಗಾಳೆಪ್ಪ ಪೂಜಾರಿ, ಸಾಹಿತಿ ಸಂಗಣ್ಣ ಹೋತಪೇಟ, ಶರಣಪ್ಪ ಬೆನಕನಹಳ್ಳಿ, ಬಸವಂತರಾಯಗೌಡ ಮಾಲಿಪಾಟೀಲ, ಗುರುನಾಥ ವಿಶ್ವಕರ್ಮ, ಡಾ.ಸಿದ್ದರಾಜ ರೆಡ್ಡಿ, ಜ್ಞಾನೇಶ್ವರ ಸಂದೇನಕರ್ ಇದ್ದರು.ಪ್ರಕಾಶ್ ಅಂಗಡಿ ಕನ್ನಳ್ಳಿ ಸ್ವಾಗತಿಸಿ, ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.