ಹುಬ್ಬಳ್ಳಿ: ‘ಎಲ್ಲ ಸಮಾಜದವರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಟೂರು ಮುಖ್ಯ ರಸ್ತೆಯ ಅಹ್ಮದ್ ಪ್ಲಾಟ್ ಸಮೀಪ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. ‘ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲ ಸಮಾಜದ ಜನರು ಹಾಗೂ ಮುಖಂಡರು ಸಹ ಬೆಂಬಲ ನೀಡುತ್ತಿದ್ದಾರೆ. ಆದ್ದರಿಂದ ಖಂಡಿತವಾಗಿ ಈ ಬಾರಿ ಗೆಲುವು ಸಾಧಿಸುತ್ತೇನೆ’ ಎಂದು ಹೇಳಿದರು.
‘ಪಕ್ಷದ ಕೆಲವು ಮುಖಂಡರು ಪ್ರಚಾರಕ್ಕೆ ಬರುತ್ತಿಲ್ಲ ಎಂಬುದರಲ್ಲಿ ಸತ್ಯವಿಲ್ಲ. ಎಲ್ಲ ಮುಖಂಡರು ನನ್ನ ಪರವಾಗಿ ಪ್ರಚಾರ ನಡೆಸಿ ಮತ ಯಾಚಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
ನೂರಾರು ಬೈಕ್: ಬೈಕ್ ರ್ಯಾಲಿಯಲ್ಲಿ ನೂರಾರು ಯುವಕರು ಭಾಗವಹಿಸಿದ್ದರು. ಅಹ್ಮದ್ ಪ್ಲಾಟ್ನಿಂದ ಆರಂಭವಾದ ರ್ಯಾಲಿ ಗಣೇಶಪೇಟೆ, ಸಿಬಿಟಿ, ಸೆಟ್ಲ್ಮೆಂಟ್, ಕೆ.ಬಿ. ನಗರ, ಯಲ್ಲಾಪುರ ಓಣಿ ಮೂಲಕ ಬಂಕಾಪುರ ಚೌಕ ತಲುಪಿತು. ಅಲ್ಲಿಂದ ಇಸ್ಲಾಂಪುರ, ಹಳೇ ಹುಬ್ಬಳ್ಳಿ ವೃತ್ತ, ಬಮ್ಮಾಪುರ ಓಣಿ, ಅಕ್ಕಿಹೊಂಡ, ದಾಜಿಬಾನ್ ಪೇಟೆ ಮೂಲಕ ಹೊರಟ ಬೈಕ್ ರ್ಯಾಲಿ ಮೂರು ಸಾವಿರ ಮಠದ ಮುಂಭಾಗ ಮುಕ್ತಾಯವಾಯಿತು.
ಕಾಂಗ್ರೆಸ್ ಹಾಗೂ ವಿನಯ ಕುಲಕರ್ಣಿ ಪರ ಕಾರ್ಯಕರ್ತರು ಘೋಷಣೆ ಕೂಗಿದರು. ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.