ನವದೆಹಲಿ (ಪಿಟಿಐ): ಬಿಜೆಪಿಯೊಂದಿಗೆ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ವಿಲೀನಗೊಳ್ಳುವ ಅಥವಾ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ವಿರೋಧಿಸಿದ್ದಾರೆ.
ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಸುಷ್ಮಾ, ಬಳ್ಳಾರಿಯ ‘ಕಳಂಕಿತ’ ರೆಡ್ಡಿ ಸಹೋದರರು ಬಿಎಸ್ಆರ್ನ ಭಾಗವಾಗಿದ್ದು, ಅಂಥವರು ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಬಿಜೆಪಿ ತೊರೆದ ಎರಡು ವರ್ಷದ ಬಳಿಕ, ಮತ್ತೆ ತಮ್ಮ ಮಾತೃಪಕ್ಷಕ್ಕೆ ಮರಳುವುದಾಗಿ ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಬುಧವಾರ ಬಳ್ಳಾರಿಯಲ್ಲಿ ಘೋಷಿಸಿದ್ದರು.
ರಾಜ್ಯ ಬಿಜೆಪಿಯಲ್ಲಿ ಗೊಂದಲ (ಬೆಂಗಳೂರು ವರದಿ): ‘ಬಿ.ಎಸ್.ಆರ್ ಕಾಂಗ್ರೆಸ್ನ ಬಿ. ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ’ ಎಂದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿರುವುದು ರಾಜ್ಯ ನಾಯಕರಲ್ಲಿ ಗೊಂದಲ ಮೂಡಿಸಿದೆ.
ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷವನ್ನು ಶ್ರೀರಾಮುಲು ಅವರು ಇನ್ನೇನು ಬಿಜೆಪಿಯಲ್ಲಿ ವಿಲೀನ ಮಾಡುತ್ತಾರೆ ಎನ್ನುವಾಗ ಈ ರೀತಿಯ ಹೇಳಿಕೆ ಹೊರ ಬಿದ್ದಿರುವುದರಿಂದ ಬಿಜೆಪಿ ನಾಯಕರಿಗೆ ದಿಕ್ಕುತೋಚದಂತೆ ಆಗಿದೆ. ಹೈಕಮಾಂಡ್ ಮನವೊಲಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಶನಿವಾರ ದೆಹಲಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಭಾಗವಹಿಸಲು ರಾಜ್ಯದ ಪ್ರಮುಖರು ದೆಹಲಿಗೆ ತೆರಳುತ್ತಿದ್ದು, ಆ ವೇಳೆ ಈ ಕುರಿತು ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.
‘ಯಡಿಯೂರಪ್ಪ ಸೇರ್ಪಡೆಗೂ ಬಿಜೆಪಿಯಲ್ಲಿ ಕೆಲವರಿಗೆ ಇಷ್ಟ ಇರಲಿಲ್ಲ. ಅದರ ನಂತರವೂ ಅವರನ್ನು ಸೇರಿಸಿಕೊಳ್ಳಲಾಯಿತು. ಹಾಗೆಯೇ ಶ್ರೀರಾಮುಲು ಪ್ರಕರಣದಲ್ಲೂ ಆಗುತ್ತದೆ’ ಎಂದು ಮುಖಂಡರೊಬ್ಬರು ತಿಳಿಸಿದರು.
ಪ್ರತಿಕ್ರಿಯೆಗೆ ಸಿಗದ ಶ್ರೀರಾಮುಲು (ಬಳ್ಳಾರಿ): ಬಿಜೆಪಿಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ವಿಲೀನಕ್ಕೆ ಸುಷ್ಮಾ ಸ್ವರಾಜ್ ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಲು ಶಾಸಕ ಬಿ.ಶ್ರೀರಾಮುಲು ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.