ADVERTISEMENT

ಬಿಎಸ್‌ಆರ್‌ ವಿಲೀನ ಸುಷ್ಮಾ ಅಪಸ್ವರ

ಚುನಾವಣಾ ರಿಂಗಣ 2014

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 15:35 IST
Last Updated 7 ಮಾರ್ಚ್ 2014, 15:35 IST

ನವದೆಹಲಿ (ಪಿಟಿಐ): ಬಿಜೆಪಿಯೊಂದಿಗೆ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್‌ ಕಾಂಗ್ರೆಸ್‌ ವಿಲೀನಗೊಳ್ಳುವ ಅಥವಾ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರು ವಿರೋಧಿಸಿದ್ದಾರೆ.

ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿರುವ ಸುಷ್ಮಾ,  ಬಳ್ಳಾರಿಯ ‘ಕಳಂಕಿತ’ ರೆಡ್ಡಿ ಸಹೋದರರು ಬಿಎಸ್‌ಆರ್‌ನ ಭಾಗ­ವಾ­ಗಿದ್ದು, ಅಂಥವರು ಪಕ್ಷದೊಂದಿಗೆ  ಗುರುತಿಸಿ­ಕೊಳ್ಳಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಬಿಜೆಪಿ ತೊರೆದ ಎರಡು ವರ್ಷದ ಬಳಿಕ, ಮತ್ತೆ ತಮ್ಮ ಮಾತೃ­ಪಕ್ಷಕ್ಕೆ ಮರಳುವುದಾಗಿ ಬಿಎಸ್‌ಆರ್‌ ಕಾಂಗ್ರೆಸ್‌ ಸಂಸ್ಥಾಪಕ ಶ್ರೀರಾಮುಲು ಬುಧವಾರ ಬಳ್ಳಾರಿಯಲ್ಲಿ ಘೋಷಿಸಿದ್ದರು. 

ರಾಜ್ಯ ಬಿಜೆಪಿಯಲ್ಲಿ ಗೊಂದಲ (ಬೆಂಗಳೂರು ವರದಿ): ‘ಬಿ.ಎಸ್‌.ಆರ್‌ ಕಾಂಗ್ರೆಸ್‌ನ ಬಿ. ಶ್ರೀರಾಮುಲು ಅವ­ರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ’ ಎಂದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿರುವುದು ರಾಜ್ಯ ನಾಯಕರಲ್ಲಿ ಗೊಂದಲ ಮೂಡಿಸಿದೆ.

ಬಿ.ಎಸ್‌.ಆರ್‌ ಕಾಂಗ್ರೆಸ್‌ ಪಕ್ಷವನ್ನು ಶ್ರೀರಾಮುಲು ಅವರು ಇನ್ನೇನು ಬಿಜೆಪಿ­ಯಲ್ಲಿ ವಿಲೀನ ಮಾಡುತ್ತಾರೆ ಎನ್ನುವಾಗ ಈ ರೀತಿಯ ಹೇಳಿಕೆ ಹೊರ ಬಿದ್ದಿರುವುದರಿಂದ ಬಿಜೆಪಿ ನಾಯಕರಿಗೆ  ದಿಕ್ಕುತೋಚದಂತೆ ಆಗಿದೆ. ಹೈ­ಕಮಾಂಡ್‌ ಮನವೊಲಿಸುವ ವಿಶ್ವಾಸ­ವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಶನಿವಾರ ದೆಹಲಿಯಲ್ಲಿ ನಡೆಯ­ಲಿದೆ. ಸಭೆಯಲ್ಲಿ ಭಾಗವಹಿಸಲು ರಾಜ್ಯದ ಪ್ರಮುಖರು ದೆಹಲಿಗೆ ತೆರಳುತ್ತಿದ್ದು, ಆ ವೇಳೆ ಈ ಕುರಿತು ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

‘ಯಡಿಯೂರಪ್ಪ ಸೇರ್ಪಡೆಗೂ ಬಿಜೆಪಿಯಲ್ಲಿ ಕೆಲವರಿಗೆ ಇಷ್ಟ ಇರಲಿಲ್ಲ. ಅದರ ನಂತರವೂ ಅವರನ್ನು ಸೇರಿಸಿ­ಕೊಳ್ಳಲಾಯಿತು. ಹಾಗೆಯೇ ಶ್ರೀ­ರಾಮುಲು ಪ್ರಕರಣದಲ್ಲೂ ಆಗು­ತ್ತದೆ’ ಎಂದು ಮುಖಂಡ­ರೊಬ್ಬರು  ತಿಳಿಸಿದರು.

ಪ್ರತಿಕ್ರಿಯೆಗೆ ಸಿಗದ ಶ್ರೀರಾಮುಲು (ಬಳ್ಳಾರಿ):  ಬಿಜೆಪಿಯೊಂದಿಗೆ ಬಿಎಸ್‌ಆರ್ ಕಾಂಗ್ರೆಸ್ ವಿಲೀನಕ್ಕೆ ಸುಷ್ಮಾ ಸ್ವರಾಜ್ ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿ­ರುವ ಕುರಿತು ಪ್ರತಿಕ್ರಿಯೆ ನೀಡಲು ಶಾಸಕ  ಬಿ.ಶ್ರೀರಾಮುಲು ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.