ADVERTISEMENT

ಮೃತ ಶಿಕ್ಷಕನಿಗೂ ಚುನಾವಣಾ ಕರ್ತವ್ಯ!

ಚನ್ನೇಶ ಬಿ.ಇದರಮನಿ
Published 28 ಮಾರ್ಚ್ 2014, 19:46 IST
Last Updated 28 ಮಾರ್ಚ್ 2014, 19:46 IST

ಹೊನ್ನಾಳಿ: ಮೃತರಾಗಿರುವ ಶಿಕ್ಷಕ­ರಿಗೂ ಚುನಾ­ವಣಾ ಕರ್ತವ್ಯ ನಿಯೋ­ಜನೆ! ವಿಚಿತ್ರ ಆದರೂ ಇದು ಸತ್ಯ. ಜಿಲ್ಲಾ ಚುನಾವಣಾ ಶಾಖೆ ರವಾನಿಸಿ­ರುವ ಕರ್ತವ್ಯ ನಿಯೋಜನೆ ಪತ್ರ ಸಾವಿ­ಗೀಡಾಗಿರುವ ಶಿಕ್ಷಕರೊಬ್ಬರ ಹೆಸರಿಗೆ ತಲುಪಿದೆ.

ತಾಲ್ಲೂಕಿನ ರಾಂಪುರ ಸರ್ಕಾರಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ಎ.ಎಚ್‌.ಬಸವವರಾಜ್‌ ಎಂಬು­ವವರು ಮೃತಪಟ್ಟು ತಿಂಗಳುಗಳೇ ಕಳೆದಿವೆ. ಆದರೆ, ಅವರಿಗೆ ಚುನಾವಣಾ ಕರ್ತವ್ಯ ನಿಯೋಜನೆ ಪತ್ರ ಕಳುಹಿಸುವ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಬದುಕಿಸಿದ್ದಾರೆ!

ಈ ಎಡವಟ್ಟುಗಳು ಇಷ್ಟಕ್ಕೇ ನಿಂತಿಲ್ಲ. ಹೆರಿಗೆ ರಜೆ ಮೇಲೆ ತೆರಳಿರುವವರು, ವಿವಿಧ ಕಾಯಿಲೆಗಳಿಂದ ನರಳುತ್ತಿರುವ­ವರು, ಅಂಗವೈಕಲ್ಯದ ಕಾರಣಕ್ಕಾಗಿ ಚುನಾವಣಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿರು­ವವರಿಗೂ ಕರ್ತವ್ಯಕ್ಕೆ ಬುಲಾವ್‌್ ಬಂದಿದೆ. ಪ್ರಮಾದ­ಗಳು ಆಗುವುದು ಸಾಮಾನ್ಯ, ಆಗಿರುವ ಪ್ರಮಾದ­ಗಳನ್ನು ಸರಿಪಡಿಸಲು ಕೂಡ ಸಂಬಂಧಿಸಿದ ಅಧಿಕಾರಿ­ಗಳು ಮುಂದಾ­ಗ­ದಿ­ರುವುದು ನೊಂದ ನೌಕರರರ ಅಸಮಾಧಾನಕ್ಕೆ ಕಾರಣವಾಗಿದೆ.

ತಮ್ಮ ಬದಲಿಗೆ ಬೇರೊಬ್ಬ ನೌಕರ­ರನ್ನು ಚುನಾ­ವಣಾ ಕರ್ತವ್ಯಕ್ಕೆ ನಿಯೋ­ಜಿ­ಸಿಕೊಳ್ಳಿ ಎಂದು ಬದಲಿ ನಿಯೋಜನೆಗೆ ಸಿದ್ಧತೆಗಳನ್ನು ಮಾಡಿಕೊಂಡು ಬಂದರೆ, ಅವರನ್ನೂ ಚುನಾವಣಾ ಶಾಖೆ ಸಿಬ್ಬಂದಿ ಗೌರವಿಸು­ತ್ತಿಲ್ಲ. ಅಧಿಕಾರಿಗಳು–ಸಿಬ್ಬಂದಿ ಅಲ್ಲಿಂದಿಲ್ಲಿಗೆ ಇಲ್ಲಿಂದ­ಲ್ಲಿಗೆ ಅಲೆದಾಡಿ­ಸುತ್ತಿ­ದ್ದಾರೆ. ನವಜಾತ ಶಿಶುವಿ­ನೊಂದಿಗೆ ಬಂದಿರುವ ತಾಯಂದಿ­ರಿಗೂ ಕರುಣೆ ತೋರು­ತ್ತಿಲ್ಲ ಅಧಿಕಾರಿಗಳು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶಿಕ್ಷಕ ರಾಜು.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್‌. ರಾಜಶೇಖರ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿ­ದಾಗ, ‘ಸಾವಿ­ಗೀ­ಡಾ­ಗಿರುವ ಶಿಕ್ಷಕರಿಗೆ ಆದೇಶ ರವಾನೆ­­ಯಾಗಿರುವುದನ್ನು ನೋಡಿದರೆ ಅಧಿಕಾ­ರಿಗಳ ಸಮನ್ವ­ಯದ ಕೊರತೆ ಎದ್ದು ಕಾಣುತ್ತದೆ. ತಿಂಗಳುಗಟ್ಟಲೇ ಕಷ್ಟಪಟ್ಟು ನೂರಾರು ಶಿಕ್ಷಕರು, ಹತ್ತಾರು ಸಿಆರ್‌ಪಿ­–ಬಿಆರ್‌ಪಿಗಳು ವಿವಿಧ ನಮೂನೆಗಳಲ್ಲಿ ಮಾಹಿತಿ ಸಂಗ್ರಹಿಸಿ, ಪರಿಷ್ಕೃತ ಎಚ್‌ಆರ್‌ಎಂಎಸ್‌ ಯಾದಿಯ ಪ್ರಕಾರ ಚುನಾವಣಾ ಶಾಖೆಗೆ ರವಾನಿಸಿದ್ದಾರೆ’ ಎಂದು ಹೇಳುತ್ತಾರೆ.

ಅಲ್ಲದೇ, ಕೇವಲ ಪ್ರಾಥಮಿಕ–ಪ್ರೌಢ ಶಾಲಾ ಶಿಕ್ಷಕರನ್ನು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಚುನಾ­ವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪದವಿಪೂರ್ವ, ಪದವಿ ಕಾಲೇಜುಗಳ ಉಪನ್ಯಾಸ­ಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿವಿಧ ಕೆಲಸ–ಕಾರ್ಯಗಳು, ಶೈಕ್ಷಣಿಕ ವರ್ಷದ ವಿವಿಧ ಕರ್ತವ್ಯಗಳ ಮಧ್ಯೆ ಶಿಕ್ಷಕರು ಚುನಾವಣಾ ಕೆಲಸವನ್ನೂ ನಿರ್ವಹಿಸ­ಬೇಕಿದೆ ಎನ್ನುತ್ತಾರೆ ಅವರು.

ತಾಲ್ಲೂಕು ಕಚೇರಿ ಚುನಾವಣಾ ಶಿರಸ್ತೇದಾರ್‌ ಶಿವಶಂಕರ್‌ ಅವರ ಪ್ರತಿಕ್ರಿಯೆ ಕೇಳಿದಾಗ, ಜಿಲ್ಲಾ ಮಟ್ಟದ ಅಧಿಕಾರಿಗಳು ಏನು ಹೇಳುತ್ತಾರೋ ಅದನ್ನು ಮಾಡುವುದಷ್ಟೇ ತಮ್ಮ ಕೆಲಸ. ಯಾವುದೇ ಕಾರ­ಣಕ್ಕೂ, ಯಾರಿಗೂ ರಿಯಾಯತಿ ತೋರಿಸಬಾರದು ಎಂಬ ಸ್ಪಷ್ಟ ಆದೇಶ ಇದೆ. ಅದರಂತೆ ನಡೆದು­ಕೊಳ್ಳುತ್ತಿದ್ದೇವೆ ಎಂದು ಉತ್ತರಿಸಿದರು.

‘ನನಗೇ ರಜೆ ಬೇಕು!’: ವಾಸ್ತವವಾಗಿ ಸದ್ಯದ ಪರಿಸ್ಥಿತಿಯಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಾಧ್ಯ ಇಲ್ಲ. ಕಿಬ್ಬೊಟ್ಟೆಯ ಭಾಗದಲ್ಲಿ ಅಲ್ಸರ್‌ ಆಗಿದೆ. ಬ್ಯಾಂಡೇಜ್‌ ಮಾಡಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇನೆ.

ಹೊನ್ನಾಳಿ ನೂರು ಹಾಸಿಗೆ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿ­ಕಾರಿ ಡಾ.ಶ್ರೀಮಂತ ಸಿದ್ದಪ್ಪ ಕೋಳ್ಕರ್‌ ವಿಶ್ರಾಂತಿ ತೆಗೆದುಕೊಳ್ಳಿ ಎಂದು ನನಗೆ ಸಲಹೆ ನೀಡಿದ್ದಾರೆ. ಆದರೂ ಅನಿವಾ­ರ್ಯ­ವಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಚುನಾವಣಾ ಶಿರಸ್ತೇದಾರ್‌ ಶಿವಶಂಕರ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.