ಕಲಬುರ್ಗಿ: ವಿದ್ಯುನ್ಮಾನ ಮತಯಂತ್ರಗಳ ಮೇಲೆ ಲಗತ್ತಿಸಲು ಅಭ್ಯರ್ಥಿಗಳು ಗಾಂಧಿ ಟೋಪಿ, ಇತರ ಯಾವುದೇ ಟೋಪಿ ಧರಿಸದೇ ಇರುವ ಮತ್ತು ಕನ್ನಡಕ ಹಾಕಿರದ ಭಾವಚಿತ್ರಗಳನ್ನು ಮಾತ್ರ ನೀಡಬೇಕು ಎಂದು ಚುನಾವಣಾ ಆಯೋಗ ಷರತ್ತು ವಿಧಿಸಿದೆ.
ಆಯೋಗದ ಈ ನಡೆಯನ್ನು ವಿರೋಧಿಸಿರುವ ಆಳಂದ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಪಾಟೀಲ, ‘ಗಾಂಧಿ ಟೋಪಿಯೇ ನನ್ನ ಗುರುತು. ಅದನ್ನು ಧರಿಸದೇ ಇರುವ ಭಾವಚಿತ್ರ ಕೊಡಬೇಕು ಎಂಬುದು ಸಂಪ್ರದಾಯಕ್ಕೆ ವಿರುದ್ಧವಾದ ನಡೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನಾನು, ಅಫಜಲಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ. ಪಾಟೀಲ, ವಿಜಯಪುರ ಜಿಲ್ಲೆ ಸಿಂದಗಿಯ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ, ಬೆಳಗಾವಿ ಜಿಲ್ಲೆ ರಾಮದುರ್ಗದ ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡ ಅವರು ಗಾಂಧಿ ಟೋಪಿ ಧರಿಸುತ್ತೇವೆ. ಗಾಂಧಿ ಟೋಪಿ ಧರಿಸದೇ ಇರುವ ಭಾವಚಿತ್ರ ನೀಡಬೇಕು ಎಂದರೆ, ಜನ ನಮ್ಮನ್ನು ಗುರುತಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದ್ದಾರೆ.
‘ಕಪ್ಪು ಕನ್ನಡಕವೇ ಕರುಣಾನಿಧಿ ಅವರು ಗುರುತು. ಕಪ್ಪು ಕನ್ನಡಕ ಮತ್ತು ಕಪ್ಪು ಟೋಪಿ ಹಾಕಿಕೊಳ್ಳದ ವಾಟಾಳ್ ನಾಗರಾಜ್ ಅವರನ್ನು ಜನ ನೋಡಿಯೇ ಇಲ್ಲ. ಕಾವಿ ಬಟ್ಟೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಧಾರ್ಮಿಕ ವಸ್ತ್ರ. ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ವಿಧಿಸಿರುವುದು ನಮ್ಮ ಸಂಪ್ರದಾಯದ ಮೇಲೆ ನಡೆದ ದಾಳಿ’ ಎಂದು ಟೀಕಿಸಿದ್ದಾರೆ.
‘ಅಭ್ಯರ್ಥಿಗಳನ್ನು ಮತದಾರರು ಸುಲಭವಾಗಿ ಗುರುತಿಸಲು ನೆರವಾಗಲಿ ಎಂಬ ಕಾರಣಕ್ಕೆ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಅಂಟಿಸಲಾಗುತ್ತದೆ. ಗಾಂಧಿ ಟೋಪಿಯಂತಹ ನಮ್ಮ ಗುರುತನ್ನೇ ಮರೆಮಾಚುವುದು ಸರಿಯೇ’ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.