ಬೆಂಗಳೂರು: ‘ಕುಮಾರಸ್ವಾಮಿ ಸನ್ನಿವೇಶದ ಶಿಶು. ಕಾಂಗ್ರೆಸ್ ಮರ್ಜಿಯಲ್ಲಿ ಇದ್ದೇನೆ ಎಂದು ಅವರು ಹೇಳುತ್ತಿರುವುದು ನಿಜ. ನನಗೂ ಆ ನೋವಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡುತ್ತೇನೆಂದು ಕುಮಾರಸ್ವಾಮಿ ಹೇಳಿದ್ದಾರೆ. ಆರೂವರೆ ಕೋಟಿ ಜನ ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. 37 ಶಾಸಕರನ್ನು ಇಟ್ಟುಕೊಂಡು ನಾವು ಹೇಗೆ ನಿರ್ಧಾರ ಮಾಡಲು ಸಾಧ್ಯ’ ಎಂದೂ ಅವರು ಪ್ರಶ್ನಿಸಿದರು.
‘ಹಣಕಾಸು ಇಲಾಖೆ ನೀಡುವಂತೆ ಕಾಂಗ್ರೆಸ್ನವರು ಕೇಳುತ್ತಿದ್ದಾರೆ. ಪ್ರಣಾಳಿಕೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇನ್ನೂ ತೀರ್ಮಾನವಾಗಿಲ್ಲ’ ಎಂದರು.
‘ಮುಖ್ಯಮಂತ್ರಿ ಸ್ಥಾನ ನೀವೇ ಇಟ್ಟುಕೊಳ್ಳಿ ಎಂದು ಕಾಂಗ್ರೆಸ್ನವರಿಗೆ ಹೇಳಿದ್ದೆ. ಆದರೆ, ಅವರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು’ ಎಂದು ಅವರುತಿಳಿಸಿದರು.
ಸದನದಲ್ಲಿ ಯಡಿಯೂರಪ್ಪ ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಷ್ಟೊಂದು ಕೀಳುಮಟ್ಟದ ಭಾಷೆ ಬಳಕೆ ಮಾಡಿದ್ದು ನಾನು ನೋಡಿಯೇ ಇಲ್ಲ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೌಡರ ಮನೆಗೆ ಸಚಿವ ಆಕಾಂಕ್ಷಿಗಳ ದೌಡು
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಶಾಸಕರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಮೇಲೆ ಪ್ರಭಾವ ಬೀರಲಾರಂಭಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಶಾಸಕರು ದೇವೇಗೌಡರನ್ನು ಭೇಟಿ ಮಾಡಿ, ಸಚಿವರಾಗಿ ಕೆಲಸ ಮಾಡಲು ಒಂದು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಬಿ.ಎಂ.ಫಾರೂಕ್, ಪರಿಷತ್ಗೆ ಪ್ರವೇಶ ಬಯಸಿರುವ ಎನ್.ಎಚ್.ಕೋನರಡ್ಡಿ ಅವರು ದೇವೇಗೌಡರನ್ನು ಭೇಟಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.