ಮಂಗಳೂರು: ‘ಚಿದಂಬರಂ ಯಾರು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯವರು ಚಿದಂಬರಂ ಬಗ್ಗೆ ಬಾಯಿ ಬಿಟ್ಟರೆ ಕಾಂಗ್ರೆಸ್ ಸರ್ವನಾಶ ಆಗಲಿದೆ’ ಎಂದು ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ ಕುಮಾರ್ ಅರ್ಧಕ್ಕೇ ಎದ್ದು ಹೋದರು. ಇದನ್ನು ಗಮನಿಸಿದ ಪೂಜಾರಿ ‘ಎಲ್ಲಿಗೆ ಹೋದರು’ ಎಂದು ಪ್ರಶ್ನಿಸಿದರು. ಅಲ್ಲಿಯೇ ಇದ್ದ ಮುಖಂಡರು, ‘ಚಿದಂಬರಂ ಬಂದಿದ್ದಾರೆ. ಅವರ ಬಳಿಗೆ ಹೋಗಿದ್ದಾರೆ’ ಎಂದರು.
ಇದರಿಂದ ಸಿಡಿಮಿಡಿಗೊಂಡ ಪೂಜಾರಿ, ‘ನಿಮಗೆಲ್ಲ ಈ ನಾಯಕರನ್ನು ಮೆಚ್ಚಿಸುವುದರಲ್ಲಿಯೇ ಸಂತೋಷ. ನಾನೇನು ಕೆಲಸ ಇಲ್ಲದ್ದಕ್ಕೆ ಇಲ್ಲಿಗೆ ಬಂದಿ
ದ್ದೀನಾ’ ಎಂದು ಖಾರವಾಗಿ ಪ್ರಶ್ನಿಸಿದರು.
ಅತಂತ್ರ ಸ್ಥಿತಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ. ನಾನು ಮೊದಲಿನಿಂದಲೂ, ನಿದ್ದೆಯಿಂದ ಎಚ್ಚೆತ್ತುಕೊಳ್ಳಿ, ಅಹಂಕಾರ ಬಿಡಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೆ. ಆದರೆ, ಅದನ್ನು ಪಾಲಿಸಿಲ್ಲ. ಸಿದ್ದರಾಮಯ್ಯ, ಮೋದಿ ಯಾರೇ ಇರಲಿ ದುರಹಂಕಾರ ಬಿಡದಿದ್ದರೆ ಅವರ ರಾಜಕೀಯ ಜೀವನ ಮುಗಿಯುತ್ತದೆ’ ಎಂದರು.
ಈಗಲೂ ಸಮಯವಿದೆ. ತಿದ್ದಿಕೊಂಡಿದ್ದೇ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಭಾರತದ ಚರಿತ್ರೆಯೇ ಕಾಂಗ್ರೆಸ್ನ ಚರಿತ್ರೆ. ಮೋದಿ, ಶಾ ಯಾರೇ ಬಂದರೂ ಕಾಂಗ್ರೆಸ್ ಅನ್ನು ಮುಗಿಸಲು ಸಾಧ್ಯವಿಲ್ಲ ಎಂದರು.
ಅಶೋಕ ಖೇಣಿ, ಆನಂದ್ ಸಿಂಗ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು ತಪ್ಪು. ಎಚ್.ವೈ. ಮೇಟಿ ಅಂಥವರ ಹೆಸರನ್ನೂ ಯಾರೂ ಹೇಳಬಾರದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.