ಬೆಂಗಳೂರು: ಚುನಾವಣೆ ದಿನದಂದು ನಗರದಿಂದ ಕಲಬುರ್ಗಿಗೆ ಜನರನ್ನು ಕರೆದೊಯ್ಯುವುದಾಗಿ ಆಮಿಷವೊಡ್ಡಿದ್ದ ಅಪರಿಚಿತರಿಬ್ಬರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚುನಾವಣಾ ಅಧಿಕಾರಿ ಕೆ.ಇ. ದಯಾನಂದ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆಮಿಷವೊಡ್ಡಿದ್ದವರು ಯಾವ ಅಭ್ಯರ್ಥಿಗೆ ಸೇರಿ
ದವರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದರು.
‘ಉದ್ಯೋಗ ಹುಡುಕಿಕೊಂಡು ಕಲಬುರ್ಗಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ನಗರಕ್ಕೆ ಬಂದಿದ್ದಾರೆ. ಅವರಲ್ಲಿ ಕೆಲವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ಚುನಾವಣೆ ಇರುವುದರಿಂದ ಮೇ 10ರಂದು ರಾತ್ರಿ ನಿಮ್ಮನ್ನೆಲ್ಲ ಉಚಿತವಾಗಿ ಬಸ್ನಲ್ಲಿ ಊರಿಗೆ ಕರೆದುಕೊಂಡು ಹೋಗುತ್ತೇವೆ. ಮೇ 13ರಂದು ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬರುತ್ತೇವೆ. ನಾವು ಹೇಳಿದ ಅಭ್ಯರ್ಥಿಗಳು ಮತ ಹಾಕಬೇಕು’ ಎಂದು ಹೇಳಿದ್ದ’ ಎಂದು ದಯಾನಂದ್ ದೂರಿನಲ್ಲಿ ತಿಳಿಸಿದ್ದಾರೆ.
‘ಉಚಿತ ಬಸ್ ವ್ಯವಸ್ಥೆ ಸಂಬಂಧ ವಾಟ್ಸ್ಆ್ಯಪ್ನಲ್ಲೂ ಮತದಾರರಿಗೆ ಸಂದೇಶ ಕಳುಹಿಸಲಾಗಿದೆ’ ಎಂದಿದ್ದಾರೆ.
‘ಆರಂಭದಲ್ಲಿ ಗಂಭೀರವಲ್ಲದ ಪ್ರಕರಣ (ಎನ್ಸಿಆರ್) ದಾಖಲಿಸಿಕೊಂಡಿದ್ದೆವು. ಇದು ಗಂಭೀರ ಪ್ರಕರಣವೆಂದ ನ್ಯಾಯಾಲಯ ಎಫ್ಐಆರ್ ದಾಖಲಿಸಿ
ಕೊಂಡು ತನಿಖೆ ನಡೆಸುವಂತೆ ಹೇಳಿದೆ. ಅದರ ನಿರ್ದೇಶನದಂತೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
‘ಕಲಬುರ್ಗಿ ಕ್ಷೇತ್ರದ ಅಭ್ಯರ್ಥಿಗಳ ಬೆಂಬಲಿಗರೇ ಈ ರೀತಿಯ ಸಂದೇಶ ಕಳುಹಿಸಿರುವ ಅನುಮಾನವಿದೆ. ಕರೆ ಹಾಗೂ ಸಂದೇಶಗಳು ಬಂದಿರುವ ಮೊಬೈಲ್ ನಂಬರ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.