ADVERTISEMENT

ಪರ್ಸೆಂಟೇಜ್‌ ಸರ್ಕಾರದ ವಿಷಯ ಬಿಚ್ಚಿಡುತ್ತೇನೆ–ದೇವೇಗೌಢ

​ಪ್ರಜಾವಾಣಿ ವಾರ್ತೆ
Published 6 ಮೇ 2018, 2:21 IST
Last Updated 6 ಮೇ 2018, 2:21 IST
ಪರ್ಸೆಂಟೇಜ್‌ ಸರ್ಕಾರದ ವಿಷಯ ಬಿಚ್ಚಿಡುತ್ತೇನೆ–ದೇವೇಗೌಢ
ಪರ್ಸೆಂಟೇಜ್‌ ಸರ್ಕಾರದ ವಿಷಯ ಬಿಚ್ಚಿಡುತ್ತೇನೆ–ದೇವೇಗೌಢ   

ಬೀರೂರು: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಮಾಡಿದ ಸಾಧನೆ ಏನು? ನನ್ನ ಮುಂದೆ ಬಂದು ನಿಲ್ಲಿ, ನಿಮ್ಮ ಪರ್ಸೆಂಟೇಜ್ ಸರ್ಕಾರದ ಪ್ರತಿಯೊಂದು ವಿಷಯವನ್ನೂ ಬಿಚ್ಚಿಡುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಇಲ್ಲಿ ಶನಿವಾರ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದ ವಿವಿಧ ಸಮುದಾಯಗಳ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿ, ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಮೊದಲು ಎಲ್ಲಿದ್ದರು? ಅವರೊಬ್ಬ ರಾಜಕೀಯ ಶಕ್ತಿ ಎಂದು ತಲೆ ಮೇಲೆ ಹೊತ್ತು ರಾಜ್ಯದಲ್ಲಿ ತಿರುಗಿದೆ. ಈಗ ನನಗೇ ಬುದ್ಧಿ ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ’ ಎಂದರು.

ADVERTISEMENT

‘ರಾಜ್ಯದ ರೈತರ ಹೊಲಗಳಿಗೆ ನೀರು ಕೊಟ್ಟರೆ, ಸಿ.ಎಂ ತರುವ ಜೋಳಿಗೆ ತುಂಬಿಸಿ ಕಳಿಸುವ ಶಕ್ತಿ ನಮ್ಮ ಜನರಿಗಿದೆ’ ಎಂದರು.

‘ಜೆಡಿಎಸ್‍ಗೆ ಹಾಕಿದ ಮತ ಬಿಜೆಪಿಗೆ ಹಾಕಿದಂತೆ ಎಂದು ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸುವ ಹೇಳಿಕೆಯನ್ನು ನಮ್ಮ ಮಹಾನ್ ಮುಖ್ಯಮಂತ್ರಿ ನೀಡಿದ್ದಾರೆ. ಈದ್ಗಾ ಸಮಸ್ಯೆ ಬಗೆಹರಿಸಿ, ಮಹಿಳೆಯರಿಗೆ, ಮುಸ್ಲಿಮರಿಗೆ ರಾಜಕೀಯ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಕಲ್ಪಿಸಿದೆ. 15 ವರ್ಷ ದೇಶವನ್ನು ಆಳಿದ ಇಂದಿರಾ ಗಾಂಧಿ ಆ ಕೆಲಸ ಮಾಡಿರಲಿಲ್ಲ’ ಎಂದು ಹೇಳಿದರು.

‘ದೇವೇಗೌಡನನ್ನು ಗೌರವಿಸಿ ಎಂದು ಮೋದಿ ಹೇಳಿಕೆ ಕೊಟ್ಟ ಕೂಡಲೇ, ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಎಂದು ಹೇಳುತ್ತಾರೆ ಎಂದು ನಾನು ಹೇಳಿದ್ದೆ. ಸೌಜನ್ಯವಿಲ್ಲದ ಕೀಳು ನಡೆ-ನುಡಿಗಳು ಮುಖ್ಯಮಂತ್ರಿಗೆ ಗೌರವ ತರುವುದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.