ಸಂತೇಬೆನ್ನೂರು: ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ನಮ್ಮ ಕಾರ್ಯಕ್ರಮಗಳನ್ನು ಕಾಪಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಇಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಅವರ ಪರ ಪ್ರಚಾರ ಮಾಡಿದ ಅವರು, ‘ಅನ್ನಪೂರ್ಣ’ ಎಂಬ ಹೆಸರಿಟ್ಟು ‘ಇಂದಿರಾ ಕ್ಯಾಂಟೀನ್’, ಅನ್ನಭಾಗ್ಯ ಯೋಜನೆಗಳನ್ನು ಕಾಪಿ ಮಾಡಲಾಗಿದೆ. ಈ ಮೊದಲು ಕೂಡ ಪ್ರಣಾಳಿಕೆ ಮಾಡಿದ್ದಾರೆ. ಆದ್ರ ಯಾವೂ ಆಚರಣೆಗೆ ಬಂದಿಲ್ಲ’ ಎಂದು ಆರೋಪಿಸಿದರು.
‘ಕ್ಯೂ ಜೂಟ್ ಬೋಲ್ ರಹೇ ಹೋ. ಕಿತನಾ ಜೂಟ್ ಬೋಲ್ ರಹೋಗೆ’ ಎಂದು ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಹಿಂದಿಯಲ್ಲಿ ಪ್ರಶ್ನಿಸಿದರು. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಈಗ ಸಾಲ ಮನ್ನಾ ಬಗ್ಗೆ ಮಾತನಾಡುವವರು ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಏಕೆ ಸಾಲ ಮನ್ನಾ ಮಾಡಲಿಲ್ಲ ಎಂದು ಕೇಳಿದರು.
ಬಿಜೆಪಿ ನಡಿಗೆ ದಲಿತರ ಕಡೆಗೆ ಎಂದು ಹೇಳಿ, ಹೊಟೇಲ್ ತಿಂಡಿ ತಂದು ದಲಿತರ ಮನೆಯಲ್ಲಿ ತಿನ್ನುವ ಜಾಯಮಾನ ನಮ್ಮದಲ್ಲ. ಎಸ್ಟಿಪಿ, ಟಿಎಸ್ಪಿ ಯೋಜನೆಯಡಿ ₹ 89 ಸಾವಿರ ಕೋಟಿ ಹಣವನ್ನು ದಲಿತರಿಗಾಗಿ ಖರ್ಚು ಮಾಡಲಾಗಿದೆ. ಗುತ್ತಿಗೆ ನೀಡುವಲ್ಲಿಯೂ ದಲಿತರಿಗೆ ಮೀಸಲಾತಿ ನೀಡಿದ್ದು, ದೇಶದಲ್ಲಿ ಕರ್ನಾಟಕ ಮಾತ್ರ ಎಂದು ಹೇಳಿದರು.
ನಾನು ಚಪ್ಪಲಿ ಹಾಕಿದ್ದು ಹೈಸ್ಕೂಲ್ ಹೋದಾಗ ಮಾತ್ರ. ಆದ್ರೆ ಈ ಶಾಲಾ ಮಕ್ಕಳಿಗೆ ಬೂಟ್ ಕೊಡಲಾಗಿದೆ. ಒಂದು ವರ್ಷಕ್ಕೆ ₹ 1,300 ಕೋಟಿ ಹೈನುಗಾರಿಕೆ ಮಾಡುವ ರೈತರ ಕಲ್ಯಾಣಕ್ಕಾಗಿ ವೆಚ್ಚ ಮಾಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.