ಬೆಂಗಳೂರು: ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಉಪವಾಸ ವ್ರತದ ನಾಟಕವಾಡುತ್ತಿದ್ದಾರೆ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲ ಟೀಕಿಸಿದರು.
ಈ ನಾಟಕಕ್ಕೆ ಅವರು ಸಂಸತ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕುಂಟುನೆಪ ಹೇಳುತ್ತಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಸಂಸತ್ ಕಲಾಪಕ್ಕೆ ತಡೆಯೊಡ್ಡುವ ಮೂಲಕ ಅಪಮಾನ ಮಾಡುತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡುತ್ತಿತ್ತೋ ಅದನ್ನೇ ಅಧಿಕಾರಕ್ಕೆ ಬಂದ ನಂತರವೂ ಮುಂದುವರಿಸಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಬೇಟಿ ಬಚಾವೋ ಎಂಬುದು ಕೇಂದ್ರದ ಯೋಜನೆ. ಆದರೆ, ಬಿಜೆಪಿಯವರಿಂದಲೇ ಬೇಟಿ ಮತ್ತು ಅವರ ಅಪ್ಪಂದಿರನ್ನು ರಕ್ಷಿಸಬೇಕಾದ ಸಂದರ್ಭ ಬಂದಿದೆ ಎಂದು ವ್ಯಂಗ್ಯವಾಡಿದರು.
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸದ ಸುರ್ಜೇವಾಲ, ‘ಸಿದ್ದರಾಮಯ್ಯನವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಅವರೇ ಕ್ಯಾಪ್ಟನ್. ಓಪನಿಂಗ್ ಬ್ಯಾಟ್ಸ್ಮನ್’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.