ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಬಳಸುವ ಬ್ರ್ಯಾಂಡೆಡ್ ನೀರಿಗಾಗಿ ಜಿಲ್ಲೆಯಲ್ಲಿ ತೀವ್ರ ಹುಡುಕಾಟ ನಡೆದಿದೆ.
ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರವಾಡ ಗ್ರಾಮದ ಹೊರ ವಲಯದಲ್ಲಿ ಇದೇ 8ರಂದು ಚುನಾವಣಾ ಪ್ರಚಾರ ರ್ಯಾಲಿ ಆಯೋಜಿಸಿದ್ದು, ಅದರಲ್ಲಿ ಮೋದಿ ಭಾಗವಹಿಸಲಿದ್ದಾರೆ.
‘ಪಕ್ಷದ ಕೇಂದ್ರ ಕಚೇರಿಯಿಂದ ಬಂದಿರುವ ಪ್ರವಾಸ ಪಟ್ಟಿಯ ಜತೆಗೆ, ವೇದಿಕೆಯಲ್ಲಿ ಪ್ರಧಾನಿಗೆ ಏನೇನು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಎಲ್ಲ ವಸ್ತುಗಳು ಸ್ಥಳೀಯವಾಗಿಯೇ ಸಿಕ್ಕಿವೆ. ಆದರೆ, ‘ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್’ ಮಾತ್ರ ಇಲ್ಲಿ ಸಿಗುತ್ತಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸುತ್ತಮುತ್ತಲ ಜಿಲ್ಲೆಗಳಲ್ಲಿ ವಿಚಾರಿಸಿದರೂ ಈ ಹೆಸರಿನ ನೀರು ಸಿಕ್ಕಿಲ್ಲ. ಅದಕ್ಕಾಗಿ ಹುಡುಕಾಟ ನಡೆದಿದೆ. ಪರ್ಯಾಯವನ್ನೂ ಸೂಚಿಸದ ಕಾರಣ ಗೊಂದಲ ಉಂಟಾಗಿದೆ’ ಎಂದು ಅವರು ಹೇಳುತ್ತಾರೆ.
‘ಪಕ್ಷದ ಕೇಂದ್ರ ಕಚೇರಿಗೆ ಈ ವಿಷಯ ತಿಳಿಸಿದ್ದೇವೆ. ಅವರ ಸಲಹೆ ಪ್ರಕಾರ ಬೇರೆ ಕಂಪನಿಯ ಬಾಟಲಿ ನೀರು ಕೊಡುತ್ತೇವೆ. ಇಲ್ಲದಿದ್ದರೆ ಲಭ್ಯ ಇರುವ ಕಡೆಯಿಂದಲೇ ತರಿಸುತ್ತೇವೆ’ ಎಂದು ಸಮಾವೇಶದ ಸಂಚಾಲಕ ವಿಜಯಕುಮಾರ ಕುಡಿಗನೂರ ‘ಪ್ರಜಾವಾಣಿ’ಗೆ ತಿಳಿಸಿದರು.
ಮುಂಬೈನಿಂದ ಬಂದಿತ್ತು: ‘2014ರ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮೋದಿ ವಿಜಯಪುರಕ್ಕೆ ಭೇಟಿ ನೀಡಿದಾಗ, ಪಕ್ಷದ ಕೇಂದ್ರ ಕಚೇರಿ ಸೂಚನೆಯಂತೆ ‘ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್’ ಬಾಟಲಿಗಳನ್ನೇ ಮುಂಬೈನಿಂದ ತರಿಸಿದ್ದೆವು’ ಎಂದು ಆಗ ಸಮಾವೇಶದ ಉಸ್ತುವಾರಿ ತಂಡದಲ್ಲಿದ್ದ ಪಕ್ಷದ ಯುವ ಮುಖಂಡರೊಬ್ಬರು ತಿಳಿಸಿದರು.
‘ಮುಂಬೈನಿಂದ ಬಂದಿತ್ತು’
‘2014ರ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮೋದಿ ವಿಜಯಪುರಕ್ಕೆ ಭೇಟಿ ನೀಡಿದಾಗ, ಪಕ್ಷದ ಕೇಂದ್ರ ಕಚೇರಿ ಸೂಚನೆಯಂತೆ ‘ಹಿಮಾಲಯನ್ ನ್ಯಾಚುರಲ್ ಮಿನರಲ್ ವಾಟರ್’ ಬಾಟಲಿಗಳನ್ನೇ ಮುಂಬೈನಿಂದ ತರಿಸಿದ್ದೆವು’ ಎಂದು ಆಗ ಸಮಾವೇಶದ ಉಸ್ತುವಾರಿ ತಂಡದಲ್ಲಿದ್ದ ಪಕ್ಷದ ಯುವ ಮುಖಂಡರೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.