ಬೆಂಗಳೂರು: ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಳ್ಳಹಳ್ಳಿಯ ಆರ್ಎಂ.ವಿ ಎರಡನೇ ಹಂತದ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಎರಡನೇ ಮತಗಟ್ಟೆಯಲ್ಲಿ (158/2) ಮತಯಂತ್ರದಲ್ಲಿ ಲೋಪವಿದ್ದ ಕಾರಣ ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಯಿತು. ಇಲ್ಲಿ ಸೋಮವಾರ ಮರುಮತದಾನ ನಡೆಯಲಿದೆ.
ಮತಯಂತ್ರದಲ್ಲಿ ನಿರ್ದಿಷ್ಟ ಅಭ್ಯರ್ಥಿಯ ಹೆಸರಿನ ಮುಂದಿನ ಚಿಹ್ನೆಯ ಮುಂದಿನ ಗುಂಡಿ ಒತ್ತಿದರೆ, ಅದು ಬೇರೊಬ್ಬ ಅಭ್ಯರ್ಥಿಗೆ ಚಲಾವಣೆಯಾಗುತ್ತಿತ್ತು. ವಿವಿಪ್ಯಾಟ್ನಲ್ಲೂ ಬೇರೆ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಳ್ಳುತ್ತಿತ್ತು. ಇಲ್ಲಿ ಅಭ್ಯರ್ಥಿಗಳಿಗಷ್ಟೇ ಅಲ್ಲ; ಅಧಿಕಾರಿಗಳಿಗೂ ಗೊಂದಲವೋ ಗೊಂದಲ.
ಇಲ್ಲಿ ಮೊದಲು ಮತ ಚಲಾಯಿಸಿದ ಗಜೇಂದ್ರ, ‘ನಾನು ಹಾಕಿದ ಅಭ್ಯರ್ಥಿಯ ಬದಲು ಬೇರೆ ಅಭ್ಯರ್ಥಿಗೆ ಮತ ಚಲಾವಣೆಯಾಗಿದೆ’ ಎಂದು ದೂರಿದರು. ಬಳಿಕ ಐದಾರು ಮಂದಿ ಮತ ಚಲಾಯಿಸಿದ್ದರು. ಅವೆಲ್ಲವೂ ಸರಿಯಾದ ಅಭ್ಯರ್ಥಿಗೆ ಚಲಾವಣೆಯಾಗಿದ್ದವು. ನಂತರ ಮಹಿಳೆಯೊಬ್ಬರು ಗುಂಡಿ ಒತ್ತಿದಾಗ, ವಿವಿಪ್ಯಾಟ್ನಲ್ಲಿ ಬೇರೆಯೇ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಂಡಿತು. ಅವರು ಈ ಬಗ್ಗೆ ದೂರಿದರು. ಆದರೆ, ಅವರ ಮಗ ಮತ ಚಲಾಯಿಸಿದಾಗ ಈ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ.
ಆ ಬಳಿಕ ಚೇತನಕೃಷ್ಣ ಎಂಬವರು ಮತಯಂತ್ರದ ಗುಂಡಿ ಒತ್ತಿದಾಗ ವಿವಿಪ್ಯಾಟ್ನಲ್ಲಿ ಅವರು ಮತ ಹಾಕಿದ ಅಭ್ಯರ್ಥಿ ಬದಲು ಬೇರೆ ಪಕ್ಷದ ಚಿಹ್ನೆ ಕಾಣಿಸಿಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.