ಬಳ್ಳಾರಿ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 14 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿ ಚೌಡಪ್ಪ ಹಾಗೂ ಬಿಜೆಪಿಯ ವೈ.ಅಣ್ಣಪ್ಪ ಅವರ ನಾಮಪತ್ರಗಳು ಕ್ರಮಬದ್ಧವಾಗಿಲ್ಲ ಎಂದು ಕಾರಣ ನೀಡಿ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಶುಕ್ರವಾರ ತಿರಸ್ಕರಿಸಿದರು.
ಚುನಾವಣಾ ವೀಕ್ಷಕರಾದ ಅಶುತೋಷ ಅವಸ್ತಿ ಮತ್ತುಶಿಯೋ ಶೇಖರ ಶುಕ್ಲಾ ಅವರ ಸಮ್ಮುಖದಲ್ಲಿ ಹಾಗೂ ಅಭ್ಯರ್ಥಿಗಳ ಹಾಜರಿಯಲ್ಲಿ ಬೆಳಿಗ್ಗೆ 11ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರಂಭವಾದ ನಾಮಪತ್ರಗಳ ಪರಿಶೀಲನೆ ಕಾರ್ಯ ಮಧ್ಯಾಹ್ನದವರೆಗೂ ನಡೆಯಿತು.
12 ಅಭ್ಯರ್ಥಿಗಳು: ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ, ಬಿಜೆಪಿಯ ವೈ.ದೇವೇಂದ್ರಪ್ಪ, ಎಸ್ಯುಸಿಐ ಪಕ್ಷದ ಎ.ದೇವದಾಸ್-3, ಬಿಎಸ್ಪಿಯ ಕೆ.ಗೂಳಪ್ಪ, ಭಾರತ ಪ್ರಭಾತ ಪಾರ್ಟಿಯ ಎಸ್.ನವೀನಕುಮಾರ್, ಆರ್ಪಿಐ (ಕರ್ನಾಟಕ)ದ ಪಿ.ಡಿ.ರಾಮನಾಯಕ್, ಸಮಾಜವಾದಿ ಪಕ್ಷದ ಟಿ.ವೀರೇಶ, ಶಿವಸೇನೆ ಪಕ್ಷದ ಈಶ್ವರಪ್ಪ ಅಂಜಿನಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಬಿ.ರಘು, ಇಂಡಿಯನ್ ಲೇಬರ್ ಪಾರ್ಟಿಯ (ಅಂಬೇಡ್ಕರ್ ಫುಲೆ) ನಾಯಕರ ರಾಮಪ್ಪ ಹಾಗೂ ಪಕ್ಷೇತರರಾದ ವೈ.ಪಂಪಾಪತಿ, ರಾಘವೇಂದ್ರ ಸೇರಿ 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಚಿತ್ರೀಕರಣ: ನಾಮಪತ್ರ ಪರಿಶೀಲನೆಯ ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.
ನಾಮಪತ್ರ ವಾಪಸು ಪಡೆಯಲು ಏ.8 ಕೊನೇ ದಿನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.