ಬಾಲಿವುಡ್ ಅಂಗಳದಲ್ಲಿ ಮುಂಚೂಣಿಯಲ್ಲಿರುವುದೇನೂ ಸುಲಭದ ಮಾತಲ್ಲ. ಯಾವುದೇ ಸೂಚನೆ ಇಲ್ಲದೆ ಎದುರಾಗುವ ಗಾಳಿಸುದ್ದಿಗಳು, ಆರೋಪಗಳು, ಮೂದಲಿಕೆ ಇತ್ಯಾದಿಗಳನ್ನು ನಿಭಾಯಿಸುವ ಕೌಶಲ ಇರಲೇಬೇಕು. ‘ಇಂಥವುಗಳಿಗೆ ಉತ್ತರಿಸಿ ನನ್ನ ಶಕ್ತಿಯನ್ನು ವ್ಯಯಿಸಲು ಆಸಕ್ತಿ ಇಲ್ಲ’ ಎಂದು ನಟಿ ದೀಪಿಕಾ ಪಡುಕೋಣೆ ತಮ್ಮ ವಿರುದ್ಧ ಆರೋಪ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಸೋನಂ ಕಪೂರ್, ‘ದೀಪಿಕಾ ತನ್ನದೇ ಆದ ಸ್ವಂತ ನಟನಾ ಶೈಲಿಯನ್ನು ಹೊಂದಿಲ್ಲ. ಜತೆಗೆ ಅತ್ಯುತ್ಸಾಹಿ ಪಿಆರ್ ತಂಡದ ಮೇಲೆ ಅತಿಯಾಗಿ ಅವಲಂಬಿಸಿದ್ದಾರೆ’ಎಂದು ಟೀಕಿಸಿದ್ದರು.
ಸೋನಂ ಟೀಕೆ ಕುರಿತು ಕೇಳಿದ್ದಕ್ಕೆ, ‘ನನ್ನ ಗುರಿ ಏನಿದ್ದರೂ ಉತ್ತಮ ಕೆಲಸ ಮಾಡುವುದೇ ಹೊರತು ಸದಾ ಎಲ್ಲರಿಗಿಂತ ಮೇಲಿರುವಂತೆ ನೋಡಿಕೊಳ್ಳುವುದಲ್ಲ. ಉತ್ತಮವಾದ ಚಿತ್ರ ತಯಾರಕರೊಂದಿಗೆ ಕೆಲಸ ಮಾಡಿದಲ್ಲಿ ಉತ್ತಮ ಪಾತ್ರಗಳು ದೊರೆಯುತ್ತವೆ.
ಅವುಗಳ ಮೂಲಕ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ನನ್ನ ಉದ್ದೇಶ’ ಎಂದು ದೀಪಿಕಾ ಪ್ರತ್ಯುತ್ತರ ನೀಡಿದರು.
ಸಂಜಯ್ಲೀಲಾ ಬನ್ಸಾಲಿ ಅವರ ‘ಬಾಜಿರಾವ್ ಮಸ್ತಾನಿ’ ಚಿತ್ರದಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ಜತೆಯಾಗಿ ನಟಿಸುತ್ತಿರುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ದೀಪಿಕಾ ಮಾತ್ರ ತುಟಿ ಬಿಚ್ಚಲಿಲ್ಲ. ಬದಲಿಗೆ ಇಮ್ತಿಯಾಜ್ ಅಲಿ ಅವರ ಮುಂದಿನ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ನಟಿಸುತ್ತಿರುವ ಕುರಿತು ತಿಳಿಸಿದರು.
‘ಏ ಜವಾನೀ ಹೈ ದಿವಾನಿ’ ಹಾಗೂ ‘ಬಚ್ನಾ ಯೇ ಹಸೀನೊ’ದಂಥ ಯಶಸ್ವಿ ಚಿತ್ರಗಳನ್ನು ನೀಡಿದ ಜೋಡಿ ನಮ್ಮದು. ಹೀಗಾಗಿ ಮುಂದಿನ ಚಿತ್ರವೂ ಹಿಟ್ ಆಗಲಿದೆ ಎಂಬುದು ನನ್ನ ವಿಶ್ವಾಸ. ಅದರಲ್ಲೂ ನನ್ನ ಉತ್ತಮ ಗೆಳೆಯನೊಂದಿಗೆ ಕೆಲಸ ಮಾಡಲು ಮತ್ತೊಂದು ಅವಕಾಶ ದೊರೆತಿದ್ದು ನಿಜಕ್ಕೂ ಸಂತೋಷ ತಂದಿದೆ’ ದೀಪಿಕಾ ನುಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.