ADVERTISEMENT

ನಂಬಿ, ‘ನಾನೊಬ್ನೆ ಒಳ್ಳೆವ್ನು’

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಚಿತ್ರ ಶೀರ್ಷಿಕೆಯ ಕಾರಣದಿಂದಲೋ ‘ಸುದ್ದಿ ಸ್ಫೋಟ’ವಾಗುತ್ತದೆ ಎಂಬ ಕಾರಣಕ್ಕೋ ಮಾಧ್ಯಮಗಳಿಗೆ ಎದುರಾದ ನಿರ್ದೇಶಕರು ಮತ್ತು ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ತುಸು ಹಿಂಜರಿಯಿತು. ಮಾಧ್ಯಮಗಳ ಆಗ್ರಹಕ್ಕೆ ಮಣಿದು ಮಾತಿಗೆ ಮುಂದಾದರೂ, ನಿರ್ದೇಶಕರಿಗಿಂತ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡಿದ್ದು ನಟಿ ಸೌಜನ್ಯ.

ಅದು ‘ನಾನೊಬ್ನೆ ಒಳ್ಳೆವ್ನು’ ಚಿತ್ರದ ಮುಹೂರ್ತದ ನಂತರದ ಸುದ್ದಿಗೋಷ್ಠಿ. ‘ಪ್ರತಿಯೊಬ್ಬ ವ್ಯಕ್ತಿಯೂ ನಾನು ಮಾತ್ರ ಒಳ್ಳೆಯವನು ಎನ್ನುವ ಮನಸ್ಥಿತಿಯಲ್ಲಿ ಬದುಕುತ್ತಿರುತ್ತಾನೆ, ನಾವು ಆತನ ನಡೆಯನ್ನು ಪ್ರಶ್ನಿಸಲು ಹೋದರೆ ಉದ್ರಿಕ್ತನಾಗುತ್ತಾನೆ...  ಮೇಲೆರಗು ತ್ತಾನೆ... ಹೀಗೆ ಚಿತ್ರಕಥೆಯನ್ನು ನಾಲ್ಕು ಮಾತಿನಲ್ಲಿ ಹೇಳಿದರು ನಿರ್ದೇಶಕ ವಿಜಯ ಮಹೇಶ್. ಚಿತ್ರದ ಟ್ಯಾಗ್ ಲೈನ್‌– ‘ಕೇಳಿದ್ರೆ ಹೋಡಿತೀನಿ’.

ಚಿತ್ರದಲ್ಲಿ ನಟಿ ಸೌಜನ್ಯ ಅವರದ್ದು ಸೈಕೋ ರೀತಿ ಪಾತ್ರವಂತೆ. ‘ನನ್ನದು ರಫ್ ಅಂಡ್ ಟಫ್ ರೋಲು. ಗಂಡಸರನ್ನು ಕಂಡರೆ ನನಗಾಗದು. ಕೊನೆಗೆ ಪ್ರೀತಿಯಲ್ಲಿ ಸಿಕ್ಕಿ ಬೀಳುವೆ. 

ಚಿತ್ರದಲ್ಲಿ ಆರು ಹಾಡುಗಳಿದ್ದು, ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಆರು ತಿಂಗಳಿನಿಂದ ಕಥೆಯನ್ನು ಹದಗೊಳಿಸಲಾಗಿದೆ’ ಎಂದು ಪಾತ್ರದ ಜೊತೆಗೆ ಚಿತ್ರಕಥೆಯ ಬಗ್ಗೆಯೂ ಮಾಹಿತಿ ನೀಡಿದರು. 

ಚಿತ್ರದ ನಾಯಕ ರವಿತೇಜ. ‘ನಾನೊಬ್ನೆ ಒಳ್ಳೆವ್ನು’ ಚಿತ್ರ ತಮ್ಮ ಅಭಿನಯವನ್ನು ಸಮರ್ಥವಾಗಿ ಹೊರ ಹೊಮ್ಮಿಸಲು ಸಿಕ್ಕ ವೇದಿಕೆ ಎಂದು ಅವರು ಪರಿಗಣಿಸಿದ್ದಾರಂತೆ. ಅವರದ್ದು ಮಧ್ಯಮ ವರ್ಗದ ಅನಾಥ ಹುಡುಗನ ಪಾತ್ರ. ಬೆಂಗಳೂರಿಗೆ ವ್ಯಾಸಂಗಕ್ಕೆ ಬಂದಿರುವ ಓಡಿಶಾದ ಆ್ಯನಿ ಪ್ರಿನ್ಸಿ ಚಿತ್ರದ ಮತ್ತೊಬ್ಬ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.