ಅದು ‘ಸ’ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ. ದೊಡ್ಡದಾದ ಸಾರ್ವಜನಿಕ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಅಲ್ಲಿ ಜಾತ್ರೆಯ ಕಳೆಯಿತ್ತು. ನಿರ್ದೇಶಕ ಹೇಮಂತ್ ಹೆಗಡೆ. ‘ನಮ್ಮ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ ಹಬ್ಬದಂತಿರಬೇಕು ಎಂಬ ಉದ್ದೇಶದಿಂದ ನಿರ್ಮಾಪಕರು ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದಾರೆ’ ಎಂದರು.
‘ದಕ್ಷಿಣ ಭಾರತದಲ್ಲೇ ಇಂತಹದ್ದೊಂದು ಥ್ರಿಲ್ಲರ್ ಸಿನಿಮಾ ಬಂದಿಲ್ಲ. ನಮ್ಮ ಚಿತ್ರ ಅಷ್ಟೊಂದು ವಿಭಿನ್ನವಾಗಿದೆ’ ಎಂದು ಹೇಳುವಾಗ ಅವರ ಮಾತುಗಳಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ‘ಇದುವರೆಗೆ ಯಾರೂ ತೋರಿಸದ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದು, ಪೋರ್ಚುಗಲ್ ಮೂಲದ ಗಾಯಕಿಯೊಬ್ಬರು ಹಾಡೊಂದಕ್ಕೆ ದನಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ನಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು.
ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಜತೆಗೆ, ಹೇಮಂತ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ ಕೂಡ. ಕಿರುತೆರೆ ಸ್ಟಾರ್ಗಳಾದ ಜೆ.ಕೆ (ಜಯರಾಮ್ ಕಾರ್ತಿಕ್) ಹಾಗೂ ವಿಜಯ್ ಸೂರ್ಯ ಈ ಚಿತ್ರದ ನಾಯಕರು. ಸಂಯುಕ್ತಾ ಹೊರನಾಡು ನಾಯಕಿ. ವೀರ್ ಸಮರ್ಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
‘ಕನ್ನಡ ಸಿನಿಮಾಗಳನ್ನು ತೆಗೆಯಲು ಹಿಂಜರಿಯುವ ಕಾಲವಿದು. ಅದರಲ್ಲೂ ಕಿರುತೆರೆಯಲ್ಲಿರುವ ನಮ್ಮನ್ನು ಹಾಕಿಕೊಂಡು ನಿರ್ದೇಶಕರು ಮತ್ತು ನಿರ್ಮಾಪಕರು ಸಿನಿಮಾ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ನನ್ನ ಪಾತ್ರ ವಿಭಿನ್ನವಾಗಿದ್ದು, ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ’ ಎಂದರು ಜೆ.ಕೆ.
ಕೊಂಚ ನರ್ವಸ್ ಆದಂತೆ ಕಂಡುಬಂದ ವಿಜಯ್ ಸೂರ್ಯ, ‘ಇದುವರೆಗೆ ಸಾತ್ವಿಕ ಪಾತ್ರಗಳಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ರಿವಾಲ್ವರ್ ಹಿಡಿದು ಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಡಿಫರೆಂಟ್ ಶೇಡ್ನಲ್ಲಿ ನನ್ನನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಇದೆ. ಆದರೆ, ಈ ಪಾತ್ರ ನನಗೆ ತುಂಬಾ ಖುಷಿ ನೀಡಿದ್ದು, ಸಿನಿಮಾ ಬಿಡುಗಡೆಗಾಗಿ ನಾನೂ ಕಾಯುತ್ತಿದ್ದೇನೆ’ ಎಂದು ಹೇಳಿದರು.
‘ಥ್ರಿಲ್ಲರ್, ಹಾರರ್, ಸಸ್ಪೆನ್ಸ್ನ ಎಲ್ಲ ಅಂಶಗಳು ಈ ಚಿತ್ರದಲ್ಲಿವೆ’ ಎಂದ ಸಂಯುಕ್ತಾ ಹೊರನಾಡು, ಚಿತ್ರದಲ್ಲಿ ತಾನು ಯಾರ ಜೋಡಿ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಿ ಎಂದರು. ನಿರ್ಮಾಪಕ ಉದಯ್ ಶೆಟ್ಟಿ ಮಾತನಾಡಿ, ‘ನಿರ್ದೇಶಕರ ಮೇಲಿನ ನಂಬಿಕೆಯಿಂದಾಗಿ ಕಥೆ ಕೇಳದೆ ಬಂಡವಾಳ ಹಾಕಿದೆ. ಆದರೆ, ನನ್ನ ನಂಬಿಕೆಗೆ ಮೀರಿದ ಫಸಲನ್ನು ನಿರ್ದೇಶಕರು ತೆಗೆದಿದ್ದಾರೆ’ ಎಂದು ಹೊಗಳಿದರು.
ಇಷ್ಟಕ್ಕೂ ಚಿತ್ರಕ್ಕೆ ‘ಸ’ ಎಂದು ಹೆಸರಿಡಲು ಏನು ಕಾರಣ? ಎಂಬ ಗುಟ್ಟನ್ನು ಮಾತ್ರ ಚಿತ್ರತಂಡ ಬಿಟ್ಟು ಕೊಡಲಿಲ್ಲ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಧ್ವನಿಮುದ್ರಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.