ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ಮೂಕನಾಯಕ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣಪತ್ರ ನೀಡಿದೆ. ಈ ಚಿತ್ರವನ್ನು ಬಾಲರಾಜ್ ನಿರ್ಮಿಸಿದ್ದಾರೆ.
ಸೂರ್ಯ ಎಂಬ ಗ್ರಾಮೀಣ ಚಿತ್ರಕಲಾವಿದ ಮತ್ತು ಆತನ ಅಕ್ಕ ಕಾವೇರಿ ಈ ಚಿತ್ರದ ಪ್ರಮುಖ ಪಾತ್ರಗಳು. ಕಲೆ ಮತ್ತು ಸಮಾಜದ ನಡುವಣ ಸಂಬಂಧವನ್ನು ಈ ಚಿತ್ರ ನಿರೂಪಿಸುತ್ತದೆಯಂತೆ.
ಸೂರ್ಯ ಮಾತು ಬಾರದವ, ತಾಯಿ-ತಂದೆಯನ್ನು ಕಳೆದುಕೊಂಡ ಅನಾಥ. ಅಕ್ಕನ ಆಶ್ರಯದಲ್ಲಿ ಬದುಕುವ ಈತನಿಗೆ ತಾನು ರಚಿಸುವ ಚಿತ್ರಗಳೇ ಮಾತು ಇದ್ದಂತೆ. ತನ್ನ ಎಲ್ಲ ಭಾವನೆಗಳನ್ನೂ ಚಿತ್ರಗಳ ಮೂಲಕ ಆತ ಅಭಿವ್ಯಕ್ತಿಸುತ್ತಾನೆ. ಅಕ್ಕ ಕಾವೇರಿ ಈತನ ಬೆಂಬಲಕ್ಕಿರುತ್ತಾಳೆ. ಈತ ದಲಿತರ ಬವಣೆ, ರೈತರ ಕಷ್ಟಗಳನ್ನು ಚಿತ್ರದಲ್ಲಿ ಹೇಳುತ್ತಾನೆ. ಆದರೆ ಈ ಚಿತ್ರಗಳಿಗೆ ಮಾರುಕಟ್ಟೆಯೇ ಇರುವುದಿಲ್ಲ.
ಹಾಗೆಂದು ಈತ ತನ್ನ ಬದ್ಧತೆಯನ್ನು ಬಲಿಕೊಡುವುದಿಲ್ಲ. ಅಕ್ಕ ಕಾವೇರಿಯ ಅಚಲ ಪೋತ್ಸಾಹ ಈತನಿಗೆ ಬಲ ತಂದುಕೊಡುತ್ತದೆ. ಈ ಚಿತ್ರವು ಹೋರಾಟಗಳ ಬಗ್ಗೆಯೂ ಮಾತನಾಡುತ್ತದೆ. ನಾಗರಾಜ ಆದವಾನಿ ಛಾಯಾಗ್ರಹಣ, ಡಾ. ಶಮಿತಾ ಮಲ್ನಾಡ್ ಸಂಗೀತ ಚಿತ್ರಕ್ಕಿದೆ. ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರುವ ಗುರಿ ತಂಡದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.