ADVERTISEMENT

ರಾಜಕಾರಣದ ‘ಆ ಒಂದು ದಿನ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ರಾಜಕಾರಣದ ‘ಆ ಒಂದು ದಿನ’
ರಾಜಕಾರಣದ ‘ಆ ಒಂದು ದಿನ’   

ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ, ಚುನಾವಣೆ ಮತ್ತು ರಾಜಕಾರಣಿಗಳ ಬಗ್ಗೆ ಸಿನಿಮಾ ಮಾಡುವ ಆಸಕ್ತಿ ಸಿನಿಮಾ ಮಂದಿಯಲ್ಲಿ ಮೂಡುತ್ತಿರುವಂತಿದೆ. ಸಾದ್ ಖಾನ್ ಅವರು ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್‌’ ಎಂಬ ಸಿನಿಮಾ ಸಿದ್ಧಪಡಿಸಿ ಜನರ ಮುಂದಿಟ್ಟಿದ್ದಾರೆ. ಅದೇ ರೀತಿ ನಿರ್ದೇಶಕ ಸಂಜಯ್ ಅವರು ‘ಆ ಒಂದು ದಿನ’ ಎಂಬ ಸಿನಿಮಾ ಸಿದ್ಧಪಡಿಸಿದ್ದಾರೆ. ಇದು ಶುಕ್ರವಾರ ತೆರೆಗೆ ಬರಲಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಈಚೆಗೆ ಸುದ್ದಿಗೋಷ್ಠಿ ಕರೆದಿತ್ತು. ‘ಇಂಥದ್ದೊಂದು ಸಿನಿಮಾ ಮಾಡಬೇಕು, ಒಂದು ಉತ್ತಮ ಸಂದೇಶವನ್ನು ವೀಕ್ಷಕರಿಗೆ ರವಾನಿಸಬೇಕು ಎಂಬ ಆಸೆ ಎರಡು ವರ್ಷಗಳಿಂದ ಇತ್ತು. ಸಿನಿಮಾ ಸ್ಕ್ರಿಪ್ಟ್ ಸಿದ್ಧ ಮಾಡಿಕೊಂಡು ಸಂಜಯ್ ಸಹಾಯದಿಂದ ಸಿನಿಮಾ ನಿರ್ಮಿಸಿದ್ದೇನೆ’ ಎಂದರು ನಿರ್ಮಾಪಕ ರವೀಂದ್ರಗೌಡ ಎನ್. ಪಾಟೀಲ.

‘ಹಣದ ಮೇಲಿನ ಮೋಹ ಈಗ ಎಲ್ಲರಲ್ಲೂ ಹೆಚ್ಚಾಗಿದೆ. ಆದರೆ ಯಾರ ಮನಸ್ಸಿನಲ್ಲೂ ಶಾಂತಿ ಇಲ್ಲ. ನಾವು ಪಡೆದಿರುವ ಪ್ರಜಾತಂತ್ರ ವ್ಯವಸ್ಥೆಯನ್ನು ಸುಧಾರಿಸಬೇಕು. ಇದು ಎಲ್ಲರ ಜವಾಬ್ದಾರಿ’ ಎಂದರು ಪಾಟೀಲ. ಅವರ ಈ ಮಾತುಗಳು ಸಿನಿಮಾದಲ್ಲೂ ಧ್ವನಿಸುತ್ತವೆಯಂತೆ. ‘ಹಣದ‌ ಮೋಹ ತೊರೆದು ಜನ ಮತ ಚಲಾವಣೆ ಮಾಡಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂಬ ಸಂದೇಶವನ್ನು ಈ ಸಿನಿಮಾ ನೀಡಲಿದೆ ಎಂದರು ಪಾಟೀಲ.

ADVERTISEMENT

ಈ ಸಿನಿಮಾದ ನಟರೆಲ್ಲರೂ ಹೊಸಬರು. ಒಂದು ಹಳ್ಳಿಯ ಜನರನ್ನು ಜೊತೆಯಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದುರ್ಗದ ಹತ್ತಿರ ಇರುವ ಸಾಣೆಹಳ್ಳಿಯಲ್ಲಿ ಚಿತ್ರೀಕರಣ ನಡೆದಿದೆ ಎಂದು ತಂಡ ಹೇಳಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಒಂದು ಐಟಂ ಸಾಂಗ್ ಇದೆ. ಅದಕ್ಕೆ ಹೆಜ್ಜೆ ಹಾಕಿರುವವರು ಧಾರವಾಡದ ಸಿಮ್ರನ್. ಇವರು ಈಗ ನೆಲೆಸಿರುವುದು ಮುಂಬೈನಲ್ಲಿ. ‘ಐಟಂ ಸಾಂಗ್‌ಗೆ ಬರುತ್ತೀರಾ ಎಂದು ಸಿನಿತಂಡ ಕೇಳಿತು. ಹಾಡು ಕೇಳಿದಾಗ ಖುಷಿ ಆಯಿತು. ಇದು ಹೇಳಿಕೊಳ್ಳಲು ಮಾತ್ರ ಐಟಂ ಸಾಂಗ್. ಆದರೆ ಇದರಲ್ಲಿ ಕೂಡ ಒಂದು ಸಂದೇಶ ಇದೆ. ವ್ಯವಸ್ಥೆಯ ವಿಡಂಬನೆ ಇದೆ’ ಎಂದರು ಸಿಮ್ರನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.