ADVERTISEMENT

ಸ‌ದ್ಗುಣ ಮೇಳೈಸಿದ ಮಾಧವ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:30 IST
Last Updated 21 ಮಾರ್ಚ್ 2019, 19:30 IST
ಅನಿತಾ ಭಟ್‌
ಅನಿತಾ ಭಟ್‌   

ವಿಧೇಯತೆ, ಪರೋಪಕಾರ, ವಿದ್ಯೆ, ದೈವಭಕ್ತಿ, ಶ್ರಮಜೀವಿ ಮತ್ತು ಧೈರ್ಯದಲ್ಲಿ ಈ ಮಾಧವ ಶೇಕಡಾವಾರು ಅಂಕಗಳಿಸಿದ್ದಾನೆ. ಆದರೆ, ಅದೃಷ್ಟದಲ್ಲಿ ಈತನದ್ದು ಶೂನ್ಯ ಸಂಪಾದನೆ. ಹಳೆಯ ಬಜಾಜ್‌ ಬೈಕ್‌ನಲ್ಲಿ ಹೊರಟ ಮಾಧವ ಅಲಿಯಾಸ್‌ ರವಿಶಂಕರ್‌ ಅವರ ಪೋಸ್ಟರ್‌ ಸುತ್ತಲೂ ಈ ಅಂಶಗಳತ್ತ ಬಾಣ ನೆಟ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ಪ್ರೀತಂ ಶೆಟ್ಟಿ.

‘ಸದ್ಗುಣ ಸಂಪನ್ನ ಮಾಧವ 100%’ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶಕನ ಟೋಪಿ ಧರಿಸಿದ್ದ ಖುಷಿ ಅವರ ಮೊಗದಲ್ಲಿತ್ತು. ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್‌ ನಡೆಯಲಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ಮನುಷ್ಯ ದೇವರನ್ನು ಅಪಾರವಾಗಿ ನಂಬುತ್ತಾನೆ. ಭಕ್ತಿ ಪರವಶನಾದರೆ ಏನೂ ಆಗುವುದಿಲ್ಲ ಎಂದು ತಿಳಿದವರೇ ಹೆಚ್ಚು. ತಂದೆ- ತಾಯಿಗೂ ಮರ್ಯಾದೆ ಕೊಡುವುದಿಲ್ಲ. ಆದರೆ, ಮನಸ್ಸಿನಲ್ಲಿ ಸಾಧಿಸುವ ಛಲವಿರುತ್ತದೆ. ಮನಸ್ಸು ಮಾತ್ರ ಹಾಗೆಯೇ ಇರುತ್ತದೆ. ಹೀಗಿರುವಂತಹ ವ್ಯಕ್ತಿಯ ಜೀವನದಲ್ಲಿ ತಿರುವುಗಳು ಬಂದಾಗ ಹೇಗೆ ಬದಲಾಗುತ್ತಾನೆ ಎನ್ನುವುದೇ ಕಥಾಹಂದರ’ ಎಂದರು ಪ್ರೀತಂ ಶೆಟ್ಟಿ.

ADVERTISEMENT

ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ನಟ ರವಿಶಂಕರ್‌, ‘ಬಾಲ್ಯದಿಂದ ಇಬ್ಬರು ಗೆಳೆಯರ ಬದುಕಿನ ಪಯಣ ಯಾವ ರೀತಿ ಇರುತ್ತದೆ ಎನ್ನುವುದೇ ಚಿತ್ರದ ತಿರುಳು’ ಎಂದು ನಕ್ಕರು.

ನಟ ಸುಮನ್‌, ‘ನಾನು ಮತ್ತು ರವಿಶಂಕರ್ ಇಬ್ಬರೂ ಸ್ನೇಹಿತರು. ನನ್ನ ಆರಂಭದ ಚಿತ್ರಗಳಿಗೆ ಅವರು ಕಂಠದಾನ ಮಾಡಿದ್ದಾರೆ. ಈಗ ಕನ್ನಡದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಪಳನಿರಾಜ್ ಸಂಗೀತ ಸಂಯೋಜಿಸಿದ್ದಾರೆ. ನಿರ್ಮಾಪಕಿ ಪೂಜಾ ರಾಜ್ ಮತ್ತು ಬಾ.ಮ. ಗಿರೀಶ್ ಬಂಡವಾಳ ಹೂಡಿದ್ದಾರೆ. ಪವಿತ್ರಾ ಲೋಕೇಶ್, ಅನಿತಾ ಭಟ್, ಕರಿಸುಬ್ಬು, ಚಂದ್ರಕಲಾ ಮೋಹನ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.