ನಟ ರವಿಶಂಕರ್ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಖಳ ಅಥವಾ ಖಡಕ್ ಪೊಲೀಸ್ ಅಧಿಕಾರಿಯ ಚಿತ್ರ. ಆದರೆ, ಇನ್ನು ಮುಂದೆ ಅವರ ಹೆಸರು ಕೇಳಿದ ತಕ್ಷಣ ‘ಸದ್ಗುಣ ಸಂಪನ್ನ’ ವ್ಯಕ್ತಿಯೊಬ್ಬನ ಚಿತ್ರ ಕೂಡ ಕಣ್ಣ ಮುಂದೆ ಬರಬಹುದು.
ಏಕೆಂದರೆ, ಪ್ರೀತಂ ಶೆಟ್ಟಿ ನಿರ್ದೇಶನದ ‘ಸದ್ಗುಣ ಸಂಪನ್ನ ಮಾಧವ 100%’ ಚಿತ್ರದಲ್ಲಿ ರವಿಶಂಕರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿಶಂಕರ್ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಚಿತ್ರದ ಶೀರ್ಷಿಕೆಯೇ ಹೇಳುತ್ತದೆ ಎಂಬ ಮಾತುಗಳು ಕೇಳಿಬಂದಿವೆ!
ವ್ಯಕ್ತಿಯೊಬ್ಬನ ಜೀವನದಲ್ಲಿ ತಿರುವುಗಳು ಬಂದಾಗ ಆತ ಹೇಗೆ, ಎಷ್ಟು ಬದಲಾಗುತ್ತಾನೆ, ಕುಟುಂಬ ಮತ್ತು ಸಮಾಜದ ಪಾಲಿಗೆ ಹೇಗೆ ಶೇಕಡ ನೂರರಷ್ಟು ಸದ್ಗುಣ ಸಂಪನ್ನ ಆಗುತ್ತಾನೆ ಎಂಬುದನ್ನು ಈ ಸಿನಿಮಾ ಹಾಸ್ಯದ ಮೂಲಕ ತೋರಿಸಲಿದೆಯಂತೆ.
ಈ ಚಿತ್ರದಲ್ಲಿ ರವಿಶಂಕರ್ ಅವರಿಗೆ ಜೋಡಿ ಯಾರು ಎಂಬುದು ಸದ್ಯದಲ್ಲೇ ತೀರ್ಮಾನ ಆಗಲಿದೆ. ಆದರೆ, ಮಾಜಿ ಪ್ರೇಯಸಿ ಆಗಿ ಅನಿತಾ ಭಟ್ ನಟಿಸುವುದು ಪಕ್ಕಾ ಆಗಿದೆ. ಚಂದ್ರಕಲಾ ಮೋಹನ್, ರಾಧಿಕಾ ರಾವ್, ವಿ. ಮನೋಹರ್, ಹರ್ಷನ್ ಗೌಡ, ದೇವ್ನಾಗ್, ಬಿ.ಜಯಮ್ಮ, ಶಿಲ್ಪಾ ಶ್ರೀನಿವಾಸ್, ರಾಧಾ ರಾಮಚಂದ್ರ, ಕರಿಸುಬ್ಬು, ಅನಿಲ್ ನೀನಾಸಂ, ಮಾಸ್ಟರ್ ಆಯುಷ್ ರಾಜ್ ಮತ್ತು ಅರ್ಣವ್ ರಾಜ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರವಿಶಂಕರ್ ಅವರ ಪುತ್ರ ಆಯುಷ್ ಅವರೂ ಈ ಚಿತ್ರದ ಮೂಲಕ ನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇಂದಿನ ಕಾಲದ ಯುವಕರು ಹೇಗಿರುತ್ತಾರೆ ಎಂಬುದನ್ನು ಪ್ರತಿನಿಧಿಸುವ ಪಾತ್ರ ಅವರದ್ದು. ಮೈಸೂರು ಮತ್ತು ಬೆಂಗಳೂರು ಕಡೆ ಚಿತ್ರೀಕರಣ ನಡೆಯಲಿದೆ.
ಪ್ರೀತಂ ಶೆಟ್ಟಿ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ನಾಲ್ಕು ಹಾಡುಗಳಿಗೆ ಪಳನಿ ಡಿ. ಸೇನಾಪತಿ ಸಂಗೀತ ಇದೆ. ಬಾ.ಮಾ.ಗಿರೀಶ್ ಹಾಗೂ ಪೂಜಾ ರಾಜ್ ಜಂಟಿಯಾಗಿ ಇದಕ್ಕೆ ಹಣ ಹೂಡುತ್ತಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಚಿತ್ರ ಸಿದ್ಧವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.