ಅಶ್ವಿನ್ ಕೋಡಂಗೆ ನಿರ್ದೇಶನದ ‘ಸ್ವಾರ್ಥರತ್ನ’ ಚಿತ್ರ ಐವತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದರಿಂದ ಉತ್ತೇಜಿತಗೊಂಡಿರುವ ಚಿತ್ರತಂಡ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.
ಆದರ್ಶ್ ಗುಂಡೂರಾಜ್ ಮತ್ತು ಇಶಿತಾ ವರ್ಷ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಕಾಮಿಡಿ ಶೈಲಿಯ ಈ ಸಿನಿಮಾದಲ್ಲಿ ರೆಟ್ರೊ ಹಾಡೊಂದು ಇದೆ.
‘ಪ್ರೇಕ್ಷಕರ ಮಧ್ಯದಲ್ಲಿ ಕುಳಿತುಕೊಂಡು ಸಿನಿಮಾ ವೀಕ್ಷಿಸುವಾಗ ಸಿಗುವ ಆನಂದ ಎಲ್ಲಿಯೂ ಸಿಗುವುದಿಲ್ಲ. ಥಿಯೇಟರ್ನ ಪರದೆ ಮೇಲೆ ರೆಟ್ರೊ ಹಾಡು ಮೂಡಿಬರುವಾಗ ಜನರು ಕೇಕೆ ಹಾಕಿ ಖುಷಿ ವ್ಯಕ್ತಪಡಿಸುತ್ತಾರೆ. ಚಿತ್ರಕ್ಕೆ ಒಳ್ಳೆಯ ಆರಂಭ ಸಿಕ್ಕಿದೆ’ ಎಂದು ಖುಷಿ ಹಂಚಿಕೊಂಡರು ನಿರ್ದೇಶಕ ಅಶ್ವಿನ್ ಕೋಡಂಗೆ.
‘ಕೆಜಿಎಫ್ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಆ ಚಿತ್ರಕ್ಕೆ ಮತ್ತಷ್ಟು ಥಿಯೇಟರ್ಗಳು ಬೇಕೆಂಬ ಬೇಡಿಕೆ ಬಂದಿದೆಯಂತೆ. ಈ ನಡುವೆಯೂ ಸ್ವಾರ್ಥರತ್ನದಂತಹ ಕೌಟುಂಬಿಕ ಚಿತ್ರಗಳನ್ನೂ ಜನರಿಗೆ ತಲುಪಿಸಬೇಕಿದೆ. ಹಾಗಾಗಿಯೇ, ನಮ್ಮ ಚಿತ್ರವನ್ನೂ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದೇವೆ. ಜನರ ಪ್ರೋತ್ಸಾಹಕ್ಕೆ ನಾನು ಆಭಾರಿ’ ಎಂದರು.
‘ಸ್ವಾರ್ಥರತ್ನ’ ಚಿತ್ರದ ಬಳಿಕ ಅವರಿಗೆ ಹೊಸ ಅವಕಾಶಗಳು ಬರುತ್ತಿವೆಯಂತೆ. ಆದರೆ, ಈಗಲೇ ಅವರು ಚಿತ್ರ ನಿರ್ದೇಶನಕ್ಕೆ ಸಿದ್ಧರಿಲ್ಲವಂತೆ. ‘ಕಥೆಯ ಎಳೆಯೊಂದು ನನ್ನ ಬಳಿ ಇದೆ. ಈಗಲೇ ಅದನ್ನು ತೆರೆಯ ಮೇಲೆ ತರುವ ಉದ್ದೇಶ ನನಗಿಲ್ಲ’ ಎಂದು ಹೇಳಿಕೊಂಡರು.
ಗುಂಡೂರಾವ್, ಇಶಿತಾ ವರ್ಷ ಮತ್ತು ಸ್ನೇಹಾ ಸಿಂಗ್ ಸಿನಿಮಾವು ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ಖುಷಿ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.