ADVERTISEMENT

ಮಲ್ಲಕಂಬಕ್ಕೆ ಮರಳಿದ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 6:45 IST
Last Updated 2 ಜನವರಿ 2012, 6:45 IST
ಮಲ್ಲಕಂಬಕ್ಕೆ ಮರಳಿದ ಮಾನ್ಯತೆ
ಮಲ್ಲಕಂಬಕ್ಕೆ ಮರಳಿದ ಮಾನ್ಯತೆ   

ಕರ್ನಾಟಕ ಮಲ್ಲಕಂಬ ಸಂಸ್ಥೆ 1982ರಿಂದಲೂ ರಾಜ್ಯದಲ್ಲಿ ಸಾಕಷ್ಟು ಉತ್ಸಾಹದಿಂದ ತನ್ನ ಕಾರ್ಯ ಚಟುವಟಿಕೆ ನಡೆಸುತ್ತಲೇ ಇದೆ.

ಕರ್ನಾಟಕ ರಾಜ್ಯ ಮಲ್ಲಕಂಬ ಸಂಸ್ಥೆಯ 15 ಜಿಲ್ಲಾ ತಂಡಗಳ ಜೊತೆಗೆ ಚಂದರಗಿ ಕ್ರೀಡಾ ವಸತಿ ಶಾಲೆ, ಬಾಗಲಕೋಟೆಯ ತುಳಸಿಗೇರಿ ಮೂಡಲಗಿ ವಸತಿ ಶಾಲೆಯಲ್ಲಿ ಪಳಗಿದ ಅನೇಕ ಮಲ್ಲಕಂಬ ಕ್ರೀಡಾಪಟುಗಳು ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.
 
ರಾಷ್ಟ್ರಮಟ್ಟದ ಮಲ್ಲಕಂಬ ಪಂದ್ಯಾವಳಿಗೆ ಪ್ರತಿವರ್ಷ 32 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಈ ಶಾಲೆಗಳು ಕಳುಹಿಸುತ್ತಾ ಬಂದಿವೆ. ರಾಷ್ಟ್ರಮಟ್ಟದ ಮಲ್ಲಕಂಬ ಪಂದ್ಯಾವಳಿಯಲ್ಲಿ ರಾಜ್ಯದ ಕ್ರೀಡಾಪಟುಗಳು ತಮ್ಮ ಕೌಶಲ ಪ್ರದರ್ಶಿಸಿ ಪದಕ ಪಡೆಯುವಲ್ಲಿ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಅಷ್ಟೇ ಅಲ್ಲದೆ ತುಳಸಿಗೇರಿ ಪ್ರೌಢ ಶಾಲೆ ಮೂಡಲಗಿ ಶಿಕ್ಷಣ ಸಂಸ್ಥೆಯ ಮಲ್ಲಕಂಬ ಕ್ರೀಡಾ ಪಟುಗಳು ರಾಷ್ಟ್ರಮಟ್ಟದಲ್ಲಿ  ತಮ್ಮ ಛಾಪು ಮೂಡಿಸಿದ್ದಾರೆ.

ಇಷ್ಟೆಲ್ಲಾ ಕಾರ್ಯ ಚಟುವಟಿಕೆಯ ಹಿಂದೆ ಲಕ್ಷ್ಮೇಶ್ವರದಲ್ಲಿರುವ ಕರ್ನಾಟಕ ಮಲ್ಲಕಂಬ ಸಂಸ್ಥೆ ಅಧ್ಯಕ್ಷ ಎನ್.ಎಸ್. ಪಾಟೀಲ ಅವರು ಕಳೆದ 30 ವರ್ಷದಿಂದಲೂ ಕಾರ್ಯ ನಿರ್ವಹಿಸಿದ ಶ್ರಮದ ಫಲವಿದೆ.

`ಎಸ್‌ಜಿಎಫ್‌ಐ ಸ್ಕೂಲ್  ಗೇಮ್ಸ ಫೇಡರೇಷನ್ ಆಫ್ ಇಂಡಿಯಾ~ದವರು ಮಲ್ಲಕಂಬ ಕ್ರೀಡೆಯನ್ನು ಶಾಲಾ ಕ್ರೀಡಾ ಪಟ್ಟಿಗೆ ಸೇರಿಸ್ದ್ದಿದು, ಪ್ರಯತ್ನಕ್ಕೆ ಸಂದ ಗೌರವವಾಗಿದೆ. ಪ್ರತಿ ಶಾಲಾ ಹಂತದಿಂದಲೇ ಮಲ್ಲಕಂಬ ಕ್ರೀಡೆ ಬೆಳೆಯಲು  ಹಾಗೂ ಇನ್ನಷ್ಟು ಕ್ರೀಡಾ ಕಲಿಗಳನ್ನು ಹುಟ್ಟು  ಹಾಕಲು ಸಹಕಾರಿಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ.

ಅನೇಕ ಬಾರಿ ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಸಂಘಟಿಸಿದ ಅನುಭವ ಹೊಂದಿರುವ ಕರ್ನಾಟಕ ರಾಜ್ಯ ಮಲ್ಲಕಂಬ ಸಂಸ್ಥೆ ಕಳೆದ ವರ್ಷದ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಮತ್ತೊಂದು ರಾಷ್ಟ್ರಮಟ್ಟದ ಮಲ್ಲಕಂಬ ಪಂದ್ಯಾವಳಿ ವ್ಯವಸ್ಥಿತವಾಗಿ ಸಂಘಟಿಸಿ, ರಾಷ್ಟ್ರಮಟ್ಟದ ಫೇಡರೇಶನ್‌ಗೆ ಮನವರಿಕೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ.
ಸಂಘಟನೆಯಲ್ಲೂ ಸೈ ಎಂಬುದನ್ನು ಸಾಬೀತು ಪಡಿಸಿದೆ.

ಈ ಸ್ಪರ್ಧೆ ಆಯೋಜನೆಗೆ ನಿರ್ಣಾಯಕರನ್ನು, ಸ್ಪರ್ಧೆಗೆ ಬೇಕಾದ ಉಪಕರಣಗಳನ್ನು ಸತತವಾಗಿ ಒದಗಿಸಲು ಸಂಸ್ಥೆ ಉತ್ಸುಕವಾಗಿದ್ದು, ಆ ಮೂಲಕ ಬೆಳೆಯುವ ಮಲ್ಲಕಂಬ ಕ್ರೀಡೆಗೆ ಬೆನ್ನೆಲುಬಾಗಿ ಕರ್ನಾಟಕ ಮಲ್ಲಕಂಬ ಸಂಸ್ಥೆ ನಿಂತಿದೆ.

ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳ ದೈಹಿಕ ಶಿಕ್ಷಣ ಅಧೀಕ್ಷಕರಿಗೆ ಮಲ್ಲಕಂಬ ಸಂಸ್ಥೆ ವತಿಯಿಂದ `ಮಲ್ಲಕಂಬ ಪಾಟೀಲರು~ ಎಂಬ ಕಿರು ಹೊತ್ತಿಗೆಯ ಮಾಹಿತಿ ಪುಸ್ತಕ ಕಳುಹಿಸಲಾಗಿದೆ. ಈ ಮೂಲಕ ಪ್ರತಿ ಜಿಲ್ಲೆಯ ಮಕ್ಕಳ ಮನದಾಳದಲ್ಲಿ ಛಾಪು ಮೂಡಿಸಿ ಆರೋಗ್ಯಕರವಾಗಿ ಬೆಳೆಯುವಂತಾಗಲು ಶ್ರಮಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಅನೇಕ ವರ್ಷಗಳಿಂದ ಹುದ್ಧೆ ಭರ್ತಿಗೆ ಮಲ್ಲಕಂಬ ಕ್ರೀಡಾ ಕಲಿಗಳಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಕಲ್ಪಿಸುತ್ತಿರುವ ನಿಯಮ ಕರ್ನಾಟಕದಲ್ಲಿ ಇಲ್ಲದೆ ಇರುವುದು ವಿಷಾದನೀಯ. ಒಂದೊಮ್ಮೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದವರಿಗೆ ಉದ್ಯೋಗದ ಭರವಸೆ ನೀಡಲು ರಾಜ್ಯ ಸರ್ಕಾರ ಮುಂದಾದರೆ, ಮಲ್ಲಕಂಬ ಕ್ರೀಡೆ ತ್ವರಿತಗತಿಯಲ್ಲಿ ರಾಜ್ಯದಲ್ಲಿ ಬೆಳೆಯಲು ಮತ್ತಷ್ಟು ಬೆಂಬಲ ನೀಡಿದಂತಾಗುತ್ತದೆ.

ಮಗುವಿನ ಬೆಳವಣಿಗೆಗೆ ಪೂರಕವಾದ ವ್ಯಾಯಾಮ ನೀಡಬಲ್ಲ ಮಲ್ಲಕಂಬ ಕ್ರೀಡೆ ಪ್ರಾಥಮಿಕ ಶಾಲಾ ಹಂತದಿಂದಲೇ ಆರಂಭಿಸಿದರೆ ಇತರ ಕ್ರೀಡೆಗಳಿಗೆ ಸ್ಫೂರ್ತಿ ಚೇತನವಾಗಬಲ್ಲದು. ದೇಶದ ಸಂಸ್ಕ್ರತಿಯನ್ನು ಉಳಿಸಲು ಈ ಕ್ರೀಡೆ ನೆರವಾಗುತ್ತದೆ. ಆದ್ದರಿಂದ `ಮಲ್ಲಕಂಬ ಉಳಿಸೋಣ~ ಎಂಬ ಉಕ್ತಿಯೊಂದಿಗೆ ನಾವೆಲ್ಲರೂ ಕಂಕಣ ಬದ್ದರಾಗೋಣ.

ಜನವರಿ ಮೊದಲ ವಾರದಲ್ಲಿ ವಿಜಾಪುರದಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ ಜರುಗಲಿದೆ. ಇದು ಯುವ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಯಾಗಲಿ. ರಾಜ್ಯದಲ್ಲಿ `ಮಲ್ಲಕಂಬ~ ಇನ್ನಷ್ಟು ಪ್ರಗತಿಯಾಗಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ.944121032, 99455-37128, 9164539466.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.