ಈ ಸಂಭ್ರಮವನ್ನು ಹೇಗೆ ಹಂಚಿಕೊಳ್ಳಬೇಕೋ ತಿಳಿಯುತ್ತಿಲ್ಲ. ನಾನು ಪಾಲ್ಗೊಳ್ಳುತ್ತಿರುವ ಅತಿ ದೊಡ್ಡ ಕಾರ್ಯಕ್ರಮ ಇದು. ಅದರಲ್ಲೇ ಮೊದಲ ಬಹುಮಾನ ಬಂದಿದೆ... ಈ ಸಾಧನೆ ಹಿಂದೆ ಶಿಕ್ಷಕರು ಹಾಗೂ ಗುರುಗಳ ಪಾತ್ರವೂ ದೊಡ್ಡದಿದೆ...
ಗೋಡ್ರೆಜ್ ಟೈಸನ್ ಆಯೋಜಿತ ರಿಯಲ್ ಗುಡ್ ಯಂಗ್ ಶೆಫ್ ಆಗಿ ಆಯ್ಕೆಗೊಂಡ ಮೆಲ್ವಿನ್ ರೀಬನ್ ಒಂದೇ ಉಸಿರಿನಲ್ಲಿ ಇಷ್ಟೆಲ್ಲಾ ಹೇಳಿ ಮುಗಿಸಿದರೆ ಸುತ್ತ ನೆರೆದಿದ್ದ ಗೆಳೆಯರಿಂದ ಮತ್ತೊಮ್ಮೆ ಚಪ್ಪಾಳೆಯ ಪ್ರೋತ್ಸಾಹ.
ಈ ಪ್ರಶಸ್ತಿ ಅನಿರೀಕ್ಷಿತ. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದಿದ್ದಂತೂ ನಿಜ. ಅಂತರರಾಷ್ಟ್ರಿಯ ಖ್ಯಾತಿ ಬಾಣಸಿಗರು ತೀರ್ಪು ನೀಡಲು ಬಂದಿದ್ದು ನನ್ನ ಭಯವನ್ನು ಇಮ್ಮಡಿಗೊಳಿಸಿತ್ತು. ಕ್ರೀಂ ಆಫ್ ಮಶ್ರೂಮ್, ಚಿಕನ್ ಸೂಪ್, ಚಿಕನ್ ಸ್ಕಾಟಾ, ಚಿಕನ್ ಕಾಂತಿ ವಿದ್ ಬಾಸ್ಪೊಕೆಲ್ ತಿನಿಸು ತೀರ್ಪುಗಾರರನ್ನು ತೃಪ್ತಿಗೊಳಿಸಿತು.
ರುಚಿಯೊಂದಿಗೆ, ಪ್ರದರ್ಶನ ಶೈಲಿ, ಒಪ್ಪ ಓರಣವಾಗಿ ಜೋಡಿಸಿಟ್ಟ ರೀತಿ, ತಯಾರಿಸಲು ತೆಗೆದುಕೊಂಡ ಸಮಯ ಮೊದಲಾದ ವಿಭಾಗಗಳಲ್ಲಿ ಪರೀಕ್ಷೆ ನಡೆಸಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು. ನಗರದ 5 ಪ್ರಮುಖ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜುಗಳ 70 ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಪಾಲ್ಗೊಂಡಿದ್ದರು. ಬಳಿಕ ಪ್ರತಿ ಕಾಲೇಜಿನಿಂದ 2 ವಿದ್ಯಾರ್ಥಿಗಳಂತೆ ಒಟ್ಟು 10 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.
ಗಾರ್ಡನ್ ಸಿಟಿ ಕಾಲೇಜು, ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯೋನೇಜ್ಮೆಂಟ್, ಕ್ರೈಸ್ಟ್ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯೋನೇಜ್ಮೆಂಟ್ ಮತ್ತು ಎಂಎಸ್ ರಾಮಯ್ಯ ಕಾಲೇಜ್ ಆಫ್ ಹೋಟೆಲ್ ಮ್ಯೋನೇಜ್ಮೆಂಟ್ನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ತೀರ್ಪುಗಾರರಾದ ಶೆಫ್ ಮನುಚಂದ್ರ, ಶೆಫ್ ವಿಜಯ್ ಮಲ್ಹೋತ್ರಾ, ಶೆಫ್ ಡಿಪ್ಪಾನ್ ಬ್ಯಾನರ್ಜಿ ಮತ್ತು ಶೆಫ್ ದೀಪಂಕರ್ ಕಾಶ್ನೋಬಿಶ್ ಪಾಲ್ಗೊಂಡಿದ್ದರು.
ವಿಜೇತರಿಗೆ ಗಾಡ್ರೇಜ್ ನೇಚರ್ಸ್ ಬಾಸ್ಕೆಟ್ ಇಂಟರ್ನ್ಶಿಪ್ ಅವಕಾಶ ನೀಡಿ ಅವರಿಗೆ ಅನುಭವ, ಕಲಿಕೆಯ ಅವಕಾಶ ಹಾಗೂ ಕೈಗಾರಿಕೆಯಲ್ಲಿ ಉತ್ತಮ ಉದ್ಯೋಗ ಪಡೆಯುವ ಅವಕಾಶವನ್ನೂ ನೀಡಿದೆ.
ಗಾಡ್ರೇಜ್ ಟೈಸನ್ ಫುಡ್ಸ್ ಲಿಮಿಟೆಡ್ನ ಉಪಾಧ್ಯಕ್ಷ ಸುಶೀಲ್ ಸಾವಂತ್ ದೇಶದ ಯುವ ಶೆಫ್ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ತೀರ್ಪುಗಾರರಾಗಿ ಆಗಮಿಸಿರುವ ಶೆಫ್ಗಳ ಕೊಡುಗೆಯೂ ಸಾಕಷ್ಟಿದೆ. ಇದೀಗ ಕಾಲೇಜು ಮಟ್ಟಕ್ಕೆ ಸೀಮಿತವಾಗಿರುವ ಸ್ಪರ್ಧೆಯನ್ನು ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯಲಾಗುವುದು ಎಂಬ ಭರವಸೆ ಅವರದು.
ತಿನಿಸು ತಯಾರಿಸಲು ಅಗತ್ಯವಾದ ಎಲ್ಲಾ ವಸ್ತುಗಳನ್ನು ಗೋಡ್ರೆಜ್ ಟೈಸನ್ ಸಂಸ್ಥೆ ಒದಗಿಸಿತ್ತು. ವಿದ್ಯಾರ್ಥಿಗಳು ತಮಗೆ ಬೇಕಾದ ವಸ್ತುವನ್ನು ಆಯ್ದುಕೊಳ್ಳುವ ಅವಕಾಶವನ್ನು ನೀಡಿತ್ತು. ಒಟ್ಟು ಎರಡೂವರೆ ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಕ್ರೈಸ್ಟ್ ವಿವಿಯ ಮೆಲ್ವಿನ್ ರೀಬನ್ ಮೊದಲ ಪ್ರಶಸ್ತಿ ಪಡೆದರೆ ಅದೇ ಕಾಲೇಜಿನ ಅಕ್ಷಯ ರನ್ನರ್ ಅಪ್ ಪ್ರಶಸ್ತಿ ಪಡೆಯುವ ಮೂಲಕ ರೋಲಿಂಗ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಬಳಿಕ ವಿದ್ಯಾರ್ಥಿಗಳು ತಾವು ಬಳಸಿದ ಸಾಮಾಗ್ರಿಗಳ ಪಟ್ಟಿ ತಯಾರಿಸಿ ಕಾರ್ಯಕ್ರಮ ಆಯೋಜಕರಿಗೆ ನೀಡಬೇಕಿತ್ತು. ಇದರಿಂದ ಚಿಕನ್ನಲ್ಲಿ ಹೊಸ ಪ್ರಯೋಗಗಳಿಗೆ ಅವಕಾಶ ಸಿಗಲಿದೆ ಎಂಬುದು ಅವರ ಅಭಿಪ್ರಾಯ.
ಈ ಹತ್ತು ಮಂದಿಯ ಪೈಕಿ ಒಬ್ಬ ವಿಜೇತನನ್ನು ಆಯ್ಕೆ ಮಾಡುವುದು ಸವಾಲಾದ ಕೆಲಸವಾಗಿತ್ತು. ಇಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ವಿಜೇತರೇ. ಇಂತಹ ಅದ್ಭುತ ಪ್ರತಿಭೆಗಳಿಗೆ ಗೋಡ್ರೆಜ್ ಉತ್ತಮ ವೇದಿಕೆ ಹಾಕಿಕೊಟ್ಟಿದೆ ಎನ್ನುತ್ತಾರೆ ಅನುಭವಿ ಶೆಫ್ ಮನುಚಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.