ADVERTISEMENT

ಹರ್ಬಲ್ ಪಾನಕ

ಗೀತಸದಾ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಕರಿಬೇವಿನ ಹಸಿರು ಪಾನಕ
ಪದಾರ್ಥಗಳು:
  ಕರಿಬೇವಿನ ಎಲೆಗಳು ಹತ್ತು, ಪುದಿನ ಎಲೆಗಳು ನಾಲ್ಕು, ಕಲ್ಲುಸಕ್ಕರೆ ನಾಲ್ಕು ಚಮಚ, ಜಲ್‌ಜೀರಪುಡಿ ಒಂದು ಚಮಚ, ಜೇನುತುಪ್ಪ ಎರಡು ಚಮಚ.

ವಿಧಾನ : ಕರಿಬೇವು ಮತ್ತು ಪುದಿನ ಎಲೆಗಳನ್ನು ರುಬ್ಬಿ ಸೋಸಿ ರಸ ತೆಗೆದು ಇದಕ್ಕೆ ಕಲ್ಲುಸಕ್ಕರೆ ಮತ್ತು ಜಲ್‌ಜೀರ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸವಿಯಲುಕೊಡಿ.  ಕರಿಬೇವಿನ ಎಲೆಗಳನ್ನು ನೀರು ಹಾಕಿ ಕುದಿಸಿ ಆರಿದಮೇಲೆ ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಸವಿಯುವುದರಿಂದ ಕಬ್ಬಿಣಾಂಶ ಕೊರತೆ ನೀಗುವುದರ ಜೊತೆ ಅತಿ ದೇಹತೂಕ ನಿವಾರಣೆಯಾಗಬಲ್ಲದು.
 

ಗರಿಕೆ ಹುಲ್ಲಿನ ಪಾನಕ
ಬೇಕಾಗುವ ಪದಾರ್ಥಗಳು:
ಹೆಚ್ಚಿದ ತಾಜಾ ಗರಿಕೆಹುಲ್ಲು  ಎರಡುಕಪ್, ಕಲ್ಲುಸಕ್ಕರೆಪುಡಿ ರುಚಿಗೆ ತಕ್ಕಷ್ಟು, ಜೇನುತುಪ್ಪ ಎರಡು ಚಮಚ, ವೈಟ್‌ಪೆಪ್ಪರ್ ಒಂದು ಚಮಚ, ಬ್ಲಾಕ್‌ಸಾಲ್ಟ್ ಅರ್ಧ ಚಮಚ

ವಿಧಾನ: ಹೆಚ್ಚಿದ ಗರಿಕೆಹುಲ್ಲನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿಜಾರಿನಲ್ಲಿ ಹಾಕಿ ರುಬ್ಬಿ ಸೋಸಿಕೊಳ್ಳಿ. ನಂತರ ಇದಕ್ಕೆ ಬೇಕಷ್ಟು ನೀರು, ಬ್ಲಾಕ್‌ಸಾಲ್ಟ್, ಕಲ್ಲುಸಕ್ಕರೆಪುಡಿ ಮತ್ತು ವೈಟ್‌ಪೆಪ್ಪರ್ ಪುಡಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಜೇನುತುಪ್ಪ ಸೇರಿಸಿ ಸವಿಯಲು ಕೊಡಿ. ರಕ್ತಶುದ್ಧೀಕರಣಕ್ಕೆ ಪೂರಕವಾದ ಈ ಪಾನಕ ಹಿಮೋಗ್ಲೋಬಿನ್ ಕೊರತೆಯನ್ನೂ ನೀಗಬಲ್ಲದು.
 

ಲಿಂಬೆಹುಲ್ಲಿನ ಪಾನಕ
ಪದಾರ್ಥಗಳು:
  ಕತ್ತರಿಸಿದ ಲಿಂಬೆಹುಲ್ಲು ಒಂದುಕಪ್, ಸಕ್ಕರೆ ನಾಲ್ಕು ಚಮಚ, ಖರ್ಜೂರ ನಾಲ್ಕು, ಜೇನುತುಪ್ಪ ಎರಡು ಚಮಚ, ಲಿಂಬೆರಸ ನಾಲ್ಕು ಚಮಚ, ಶುಂಠಿ ಅರ್ಧಇಂಚು.

ವಿಧಾನ: ಲಿಂಬೆಹುಲ್ಲನ್ನು ಶುಂಠಿ ಮತ್ತು ಖರ್ಜೂರದ ಜೊತೆ ಸೇರಿಸಿ ರುಬ್ಬಿ ಸೋಸಿ ಬೇಕಷ್ಟು ನೀರು, ಸಕ್ಕರೆ, ಲಿಂಬೆರಸ ಹಾಕಿ ಕಲಕಿ ಜೇನುತುಪ್ಪ ಸೇರಿಸಿ ಸವಿಯಲು ಕೊಡಿ.

ದೊಡ್ಡಪತ್ರೆ ಪಾನಕ
ಪದಾರ್ಥಗಳು:
ದೊಡ್ಡಪತ್ರೆ ಎಲೆಗಳು ಹತ್ತು, ವಂದೆಲಗ ಎಲೆಗಳು ಹತ್ತು, ಜೇನುತುಪ್ಪ ನಾಲ್ಕು ಚಮಚ, ನೆನೆಸಿದ ಒಣದ್ರಾಕ್ಷಿ ಹತ್ತು, ಕಾಳುಮೆಣಸಿನ ಪುಡಿ ಅರ್ಧ ಚಮಚ.

ವಿಧಾನ: ದೊಡ್ಡಪತ್ರೆ ಮತ್ತು ವಂದೆಲಗ ಎಲೆಗಳನ್ನು ಒಣದ್ರಾಕ್ಷಿ ಜೊತೆ ರುಬ್ಬಿ ಸೋಸಿ ರಸ ತೆಗೆದು ಇದಕ್ಕೆ ಜೇನುತುಪ್ಪ ಹಾಕಿ ಕರಗಿಸಿ ಮೇಲಿನಿಂದ ಕಾಳುಮೆಣಸಿನ ಪುಡಿ ಉದುರಿಸಿ ಸರ್ವ್ ಮಾಡಿ. ಬೇಸಿಗೆಯಲ್ಲಿ ಉಂಟಾಗುವ ಶೀತ, ಕಫ ನಿವಾರಿಸುವ ಇದು ಅಜೀರ್ಣವನ್ನು ನಿವಾರಿಸಬಲ್ಲದು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.