ADVERTISEMENT

ನಲ್ಕೆದಬೆಟ್ಟು ಗುತ್ತು ಮನೆಗೆ ಕಾಯಕಲ್ಪ

ಸಿದ್ಧಾಪುರ ವಾಸುದೇವ ಭಟ್ಟ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST
ನಲ್ಕೆದಬೆಟ್ಟು ಗುತ್ತು ಮನೆಗೆ ಕಾಯಕಲ್ಪ
ನಲ್ಕೆದಬೆಟ್ಟು ಗುತ್ತು ಮನೆಗೆ ಕಾಯಕಲ್ಪ   

ನಿಟ್ಟೆ ಕಾರ್ಕಳ ತಾಲ್ಲೂಕಿನ ಪುಟ್ಟ ಗ್ರಾಮ. ಗ್ರಾಮದ ಮಧ್ಯ ಭಾಗದಲ್ಲಿ `ನಲ್ಕೆದಬೆಟ್ಟು ಗುತ್ತು ಮನೆ~ಇದೆ. ಈ ಮನೆ ಈಗ ಸುತ್ತ ಮುತ್ತಲಿನ ಊರುಗಳ ಜನರ ಆಕರ್ಷಣೆಯ ಕೇಂದ್ರ. ಸುಮಾರು ಆರು ನೂರು ವರ್ಷಗಳ ಇತಿಹಾಸವಿರುವ ಈ ಗುತ್ತು ಮನೆ ಮೂಲ ರೂಪದಲ್ಲೇ ಪುನರ್‌ನಿರ್ಮಾಣಗೊಂಡು ಎಲ್ಲರನ್ನೂ ಸೆಳೆಯುತ್ತಿದೆ!

ನಲ್ಕೆದಬೆಟ್ಟು ಗುತ್ತು ಮನೆತನಕ್ಕೆ ಗ್ರಾಮದ ನಾಯಕತ್ವದ ಪರಂಪರೆ ಇದೆ. ವರ್ಷಕ್ಕೊಮ್ಮೆ ನಡೆಯುವ ಕೊಡಮಣಿತ್ತಾಯ ದೈವ ಕೋಲದ ನಾಯಕತ್ವ ವಹಿಸುತ್ತಿದ್ದವರು ಈ ಮನೆಯವರೇ. ಇಂದಿಗೂ ಊರಿನ ಕೋಲದ ಯಜಮಾನಿಕೆ ಈ ನಲ್ಕೆದಬೆಟ್ಟು ಗುತ್ತು ಹಾಗೂ ನಿಟ್ಟೆ ಗುತ್ತು ಕುಟುಂಬದವರಿಗೆ ಸೇರಿದೆ. ಊರಿನ ದೈವದ ಭಂಡಾರ ಈಗಲೂ ಈ ಮನೆಯಲ್ಲೇ ಇರಿಸಲಾಗುತ್ತಿದೆ. ಈ ಮನೆ ಸುಮಾರು 7ಸಾವಿರ ಚದರ ಅಡಿಗಳಷ್ಟು ವಿಶಾಲವಾಗಿತ್ತು. ಎರಡು ಸುತ್ತಿನ ಪೌಳಿಗಳನ್ನು ಹೊಂದಿತ್ತು. ಮಣ್ಣಿನ ಗೋಡೆಗಳ ಈ ಮನೆ ಕಾಲದ ಆಘಾತಕ್ಕೆ ಸಿಲುಕಿ ಶಿಥಿಲವಾಗುತ್ತ ಸುಮಾರು 5ಸಾವಿರ ಚದರ ಅಡಿಯಷ್ಟಕ್ಕೆ ಬಂದು ನಿಂತಿತ್ತು. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದವು. ಹೆಂಚಿನ ಮಾಡು ಅಲ್ಲಲ್ಲಿ ಕೆಳಕ್ಕೆ ಇಳಿದಿತ್ತು. 

 ಈ ಜೈನ ಮನೆತನದ ನಾಲ್ಕು ಕವಲಿನವರು ಒಟ್ಟಾಗಿ ಸೇರಿ ತಮ್ಮ ಹಿರಿಯರ ಮನೆಯನ್ನು ಹಿಂದಿನ ರೂಪದಲ್ಲೇ ಪುನರ್‌ನಿರ್ಮಿಸುವ ಚಿಂತನೆ ನಡೆಸಿದರು. ಮನೆತನದ ಈಗಿನ ಹಿರಿಯರಾದ ರಘುಚಂದ್ರ ಭಂಡಾರಿ ಅವರ ನೇತೃತ್ವದಲ್ಲಿ 2009ರ ಮಾರ್ಚ್‌ನಲ್ಲಿ ಸಮಾಲೋಚನೆ ನಡೆಸಿ ಮನೆಯ ಪುನರ್‌ನಿರ್ಮಾಣದ ಸಂಕಲ್ಪ ಮಾಡಿದರು. ಇದಕ್ಕಾಗಿ ಮನೆತನದ 18 ಸದಸ್ಯರ  `ಫ್ಯಾಮಿಲಿ ಟ್ರಸ್ಟ್~ ರಚನೆಯಾಯಿತು. ಮಣಿಪಾಲದ  `ರೆಡ್ ಅರ್ತ್ ಕನ್‌ಸ್ಟ್ರಕ್ಷನ್~ನ ಹರೀಶ್ ಪೈ ಅವರ ಮಾರ್ಗದರ್ಶನದಲ್ಲಿ 75ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಮನೆಯ ಹಿಂದಿನ ವಾಸ್ತು ಶೈಲಿಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

 ಮನೆಯ ಎದುರು ಚೌಕಿ ಇದೆ. ಬಲಕ್ಕೆ ಹೆರಿಗೆ ಕೋಣೆ. ಬಾಣಂತಿಯರ ಸೂತಕಕ್ಕಾಗಿ ಇದು ಪ್ರತ್ಯೇಕವಾಗಿದೆ. ಮಧ್ಯದಲ್ಲಿ ಅಂಗಳ, ಒಳಗೆ ದೇವರ ಕೋಣೆ. ಜೈನ ಸಂಪ್ರದಾಯದಂತೆ ಪದ್ಮಾವತಿ ಮತ್ತು ಪಾರ್ಶ್ವನಾಥರ ವಿಗ್ರಹ (ಇವನ್ನೂ ಈಗ ಹೊಸತಾಗಿ ಮಾಡಿಸಲಾಗಿದೆ)ಗಳಿವೆ. ದೇವರ ಕೋಣೆಯ ಎದುರು ಅಡುಗೆ ಕೋಣೆ. ಅದಕ್ಕೆ ತಾಗಿಕೊಂಡು ಊಟದ ಹಜಾರ. ಹಿಂದೆ ನ್ಯಾಯ ತೀರ್ಮಾನವಾಗುತ್ತಿದ್ದ ಮನೆಯ ಚಾವಡಿ, ಅವಿಭಕ್ತ ಕುಟುಂಬಕ್ಕೆ ಅಗತ್ಯವಾದ ದವಸ ಧಾನ್ಯ ಸಂಗ್ರಹದ ಉಗ್ರಾಣ ಎಲ್ಲವನ್ನೂ ಹಿಂದಿನಂತೆ ಉಳಿಸಿಕೊಳ್ಳಲಾಗಿದೆ. ಮನೆಯ ಹಿಂದಿನ ಅಟ್ಟವನ್ನು ಈಗ ಮಹಡಿಯನ್ನಾಗಿ ಬಳಸಿಕೊಳ್ಳಲಾಗಿದೆ.  ಮರದ ಮುಚ್ಚಿಗೆ, ಕಾಷ್ಠ ಶಿಲ್ಪಗಳು, ಭೀಮಗಾತ್ರದ ಹಲಸಿನ ಮರದ ಕಂಬಗಳು, ಮರದ ಪೀಠೋಪಕರಣಗಳಲ್ಲಿ ಕೆಲವನ್ನು ಹೊಸದಾಗಿ ಮಾಡಿಸಲಾಗಿದೆ.

ಈ ಮನೆಗೆ ಸಂಬಂಧಿಸಿದ ಮೂರು ದೈವಗಳಿವೆ. ಮನೆ ಸಮೀಪ ಭಟಾರ ಮತ್ತು ರಕ್ತೇಶ್ವರಿ ಗುಡಿಗಳಿವೆ. ಮತ್ತೊಂದು ದೈವ ಗುತ್ತಿಪಂಜುರ್ಲಿ ಗುಡಿ ರಸ್ತೆಯ ಆಚೆ ಇದೆ. ಇವನ್ನೂ ಈ ಸಂದರ್ಭದಲ್ಲಿ ನವೀಕರಣಗೊಳಿಸಲಾಗಿದೆ.     

ಈ ಮನೆಯಲ್ಲಿ ಪ್ರತಿ ವರ್ಷ ಕದಿರು ಕಟ್ಟುವುದು (ಹೊಸ್ತು), ದೀಪಾವಳಿ, ಮಾಳ ಕಾರ್ಯ, ಮನೆಯ ತೂಗುಮಂಚದಲ್ಲಿ ಕೊಡಮಣಿತ್ತಾಯ ದೈವಕ್ಕೆ ಪ್ರತಿ ಸಂಕ್ರಮಣದಂದು ದೀಪವಿಡುವುದು, ಭೂತಗಳಿಗೆ ಪಂಚ ಕಜ್ಜಾಯ ಅರ್ಪಿಸುವ ಹಬ್ಬ ಇತ್ಯಾದಿ ಆಚರಣೆಗಳನ್ನು ಹಿಂದೆ ಹಿರಿಯರ ಕಾಲದಲ್ಲಿ ಆಚರಿಸುತ್ತಿದ್ದಂತೆ ಇಂದಿಗೂ ಮತ್ತು ಮುಂದಿನ ಪೀಳಿಗೆಯವರೂ ಆಚರಿಸಿಕೊಂಡು ಹೋಗುವ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ. ಮನೆಯ ಕುಟುಂಬ ವರ್ಗದ ನಾಲ್ಕು ಕವಲಿನವರು ಸರದಿಯಂತೆ ಈ ಮನೆಯಲ್ಲಿ ವಾಸವಿದ್ದು ಮನೆಯ ಕಟ್ಟಳೆಗಳನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ.

ಕಾಂಕ್ರೀಟ್ ಕಟ್ಟಡಗಳು ವಿಜೃಂಭಿಸುವ ಈ ಕಾಲದಲ್ಲಿ ಹಳೆಯ ಹೆಂಚಿನ ವಿಶಾಲ ಮನೆ ಹಿಂದಿನಂತೆ ವಿಶಿಷ್ಟವಾಗಿ ರೂಪುಗೊಂಡಿರುವುದು ಉಲ್ಲೇಖನೀಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.