ADVERTISEMENT

ಅರ್ಥ ಫಲವಂತಿಕೆಯ ಫೋಟೊಗಳು

ಅಂಡರ್ ಎಕ್ಸ್‌ಪೋಸ್ಡ್

ಹೇಮಾ ವೆಂಕಟ್
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST
ಮಧುಸೂದನ್ ಅವರ ನಿಸರ್ಗ ಚಿತ್ರ
ಮಧುಸೂದನ್ ಅವರ ನಿಸರ್ಗ ಚಿತ್ರ   

ಛಾಯಾಚಿತ್ರ ತೆಗೆಯಲು ಅದರದೇ ಆದ ಒಂದು ಶಿಸ್ತು ಇದೆ. ಆದರೆ ಎಲ್ಲರೂ ಅಧ್ಯಯನ ಮಾಡಿಯೇ ಚಿತ್ರ ತೆಗೆಯುತ್ತಾರೆ ಅಥವಾ ತೆಗೆಯಬೇಕು ಎಂಬ ನಿಯಮವೇನಿಲ್ಲ. ಸಂದರ್ಭದ ನೆನಪಿನ ದಾಖಲೆಯಾಗಿ ಅಷ್ಟೆ ಚಿತ್ರ ತೆಗೆಯುವಾಗ ಈ ಯಾವ ನಿಯಮವೂ ಅನ್ವಯಿಸುವುದಿಲ್ಲ.

ಆದರೆ ಛಾಯಾಚಿತ್ರಗ್ರಹಣವನ್ನು ಕಲೆಯಾಗಿ ಕಂಡಾಗ ಅಲ್ಲಿ ಸಂಯೋಜನೆಯೇ (ಕಂಪೋಸಿಷನ್) ಮುಖ್ಯವಾಗುತ್ತದೆ. ಹಾಗಾಗಿಯೇ ಬರಿ ಕಣ್ಣಿಗೆ ಕಾಣುವುದಕ್ಕಿಂತ ಅಗಾಧವಾದದ್ದನ್ನು ಕಾಣಿಸುವ ಶಕ್ತಿ ಛಾಯಾಚಿತ್ರಗಳಿಗಿವೆ.

ಕ್ಯಾಮೆರಾ ಜಗತ್ತಿನಲ್ಲಿ ನಡೆದ ಕ್ರಾಂತಿ ಪ್ರತಿಯೊಬ್ಬನಲ್ಲೂ ಫೋಟೊ ತೆಗೆಯುವ ಹುಚ್ಚು ಹೆಚ್ಚಿಸಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದ ಮೇಲೆ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆಲ್ಲ ವೃತ್ತಿಪರ ಛಾಯಾಗ್ರಾಹಕರನ್ನು ಅವಲಂಬಿಸಬೇಕಾದ ಅನಿವಾರ್ಯ ಕಡಿಮೆಯಾಗಿದೆ.

ADVERTISEMENT

ಆದರೆ ಛಾಯಾಗ್ರಹಣವನ್ನೇ ವೃತ್ತಿ ಮಾಡಿಕೊಂಡು ಅಲೆದಾಡಿ ಅದ್ಭುತ ಚಿತ್ರಗಳನ್ನು ದಾಖಲಿಸುವ ದೊಡ್ಡ ಸಮೂಹವೇ ಇದೆ. ನಗರದಲ್ಲಿ ಆಗಾಗ ಇಂತಹ ಅವರೂಪದ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ.ಞ

ಸದ್ಯ ಕ್ರೆಸೆಂಟ್ ರಸ್ತೆಯಲ್ಲಿರುವ `ನಳಪಾದ್ಸ್', `ಹೋಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್'ನಲ್ಲಿ ಇಂತಹ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಜುಲೈ 5ರವರೆಗೆ ಪ್ರದರ್ಶನ ನಡೆಯಲಿದೆ.

ಸ್ನೇಹಲ್ ಅವರ ಮಾನವಾಸಕ್ತಿಯ ಚಿತ್ರ
ಸಿದ್ದಾರ್ಥ್ ವೈದ್ಯನಾಥನ್ ಅವರ ಭಾವನಾತ್ಮಕ ಚಿತ್ರ
ಪ್ರದೀಪ್ ಬಿ.ಆರ್. ಅವರ ಕಾಣಿಸಿ ನಿಸರ್ಗ
ಸಂದೀಪ್ ರಾಜಶೇಖರನ್ ಅವರ ಕಡಿಮೆ ಬೆಳಕಿನ ಛಾಯಾಚಿತ್

ನಿಜಕ್ಕೂ ಪ್ರದರ್ಶನದಲ್ಲಿರುವ ಛಾಯಾಚಿತ್ರಗಳನ್ನು ನೋಡಿದರೆ ವರ್ಣಚಿತ್ರಗಳೇನೋ ಎಂಬ ಸಂಶಯ ಮೊದಲಿಗೆ ಮೂಡುತ್ತದೆ. ನಮ್ಮ ಸುತ್ತಲಿ

ನ ಜಗತ್ತು ಇಷ್ಟು ಅದ್ಭುತವಾಗಿದೆಯೇ ಎಂದು ಅಚ್ಚರಿಯೂ ಆಗುತ್ತದೆ. ಇವರಲ್ಲಿ ಬೇರೆ ಬೇರೆ ವೃತ್ತಿಯಲ್ಲಿದ್ದು ಹವ್ಯಾಸಕ್ಕಾಗಿ ಕ್ಯಾಮೆರಾ ಎತ್ತಿಕೊಂಡವರಿದ್ದಾರೆ. ಕ್ಯಾಮೆರಾ ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡವರಿದ್ದಾರೆ. ಕ್ಯಾಮೆರಾ ಮೋಹದಿಂದ ವೃತ್ತಿ ತೊರೆದವರೂ ಇದ್ದಾರೆ. ಇವರೆಲ್ಲ ಈ ಜಗತ್ತನ್ನು ಅದ್ಭುತವಾಗಿ ಪರಿಭಾವಿಸಿಕೊಂಡಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಕೋದಂಡರಾಮ್ ಅವರಿಗೆ ಸುತ್ತಾಡುವುದು ಇಷ್ಟದ ಹವ್ಯಾಸ. ಮೊದಮೊದಲು ಹವ್ಯಾಸಕ್ಕೆಂದು ಕ್ಯಾಮರಾ ಹಿಡಿದ ಇವರು ನಂತರ ಅದನ್ನೇ ವೃತ್ತಿಯಾಗಿಸಿಕೊಂಡವರು. `ಛಾಯಾಚಿತ್ರಗಳು ಬರಿಗಣ್ಣಿಗೆ ಕಾಣದೆ ತಪ್ಪಿಸಿಕೊಂಡ ಅನೇಕ ದೃಶ್ಯಗಳನ್ನು ನೋಡುವ ದೊಡ್ಡ ಬಾಗಿಲು' ಅಂತಾರೆ ಕೋದಂಡರಾಂ.

ಬೆಂಗಳೂರು ಮೂಲದ 21 ವರ್ಷದ ಸ್ನೇಹಲ್‌ಗೆ ವ್ಯಾಸಂಗಕ್ಕೆಂದು ಕೋಲ್ಕತ್ತಾಗೆ ಹೋಗುವ ಹಾದಿಯಲ್ಲಿ ಛಾಯಾಚಿತ್ರಗಳ ಪ್ರಭಾವದ ಬಗ್ಗೆ ಜ್ಞಾನೋದಯವಾಯಿತಂತೆ. `ನನ್ನ ಛಾಯಾಚಿತ್ರಗಳು ಕಥೆ ಹೇಳುತ್ತವೆ. ನಾನು ತೆಗೆಯುವ ಚಿತ್ರಗಳಲ್ಲಿ ನನ್ನ ಅನುಭವದ ಛಾಯೆ ಇರುತ್ತದೆ. ಹಾಗಾಗಿ ಹೆಚ್ಚಿನ ಚಿತ್ರಗಳು ಪ್ರವಾಸದ ಸಂದರ್ಭದಲ್ಲಿ ಬೀದಿಯಿಂದ ಹುಟ್ಟಿದ್ದು' ಎನ್ನುತ್ತಾರೆ ಅವರು.

ಛಾಯಾಗ್ರಹಣ ನನ್ನ ಹವ್ಯಾಸ. ನನಗೆ ಫೋಟೊ ತೆಗೆದು ಎಲ್ಲರೊಂದಿಗೆ ಹಂಚಿಕೊಳ್ಳುವುದು ಖುಷಿಯ ಕೆಲಸ ಎನ್ನುವ ಮಧುಸೂದನ್, `ಛಾಯಾಗ್ರಹಣ ಒಂದು ಕಲೆ. ಯಾಕೆಂದರೆ ಒಂದು ಚಿತ್ರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡುತ್ತದೆ. ನೋಡುಗನ ದೃಷ್ಟಿಕೋನ ಮತ್ತು ಆತನ ಅಭಿರುಚಿ ಸೇರಿ ಬೇರೆಯೇ ಅರ್ಥ ಕೊಡುತ್ತದೆ' ಎನ್ನುತ್ತಾರೆ.

ಎಂಜಿನಿಯರಿಂಗ್ ಪದವೀಧರ ಪ್ರದೀಪ್ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಉದ್ಯೋಗಿ. ಎಸ್‌ಎಲ್‌ಆರ್‌ಬಿಬಿ ಫೋರಂನಲ್ಲಿ ಛಾಯಾಗ್ರಹಣದ ಮೂಲ ಪಾಠ ಕಲಿತವರು. `ಛಾಯಾಗ್ರಹಣದ ಜೊತೆಗೆ ಚಾರಣ, ಸೈಕ್ಲಿಂಗ್, ಕ್ರಿಕೆಟ್ ಆಟಗಳ ಒಡನಾಟವೇ ನಾನು ಉತ್ತಮ ಫೋಟೋಗ್ರಾಫರ್ ಆಗಲು ಸಹಕಾರಿಯಾಗಿದೆ' ಎನ್ನುತ್ತಾರೆ ಪ್ರದೀಪ್.

ಭಾರತದ ಪುರಾತನ ಇತಿಹಾಸ, ಶಿಲ್ಪಕಲೆಗಳಲ್ಲಿರುವ ಅಧ್ಯಾತ್ಮ ಮತ್ತು ಮಿಥ್ಯಗಳನ್ನು ಪ್ರಕಟಪಡಿಸುವ ಎಂಜಿನಿಯರಿಂಗ್ ಕೌಶಲಗಳನ್ನು ದಾಖಲಿಸುವುದು ಸಂದೀಪ್‌ಗೆ ಇಷ್ಟ. ಸೀಮಿತ ಬೆಳಕಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಚಿತ್ರ ಸೆರೆ ಹಿಡಿಯುವುದು ಅವರ ವಿಶೇಷತೆ.

`ನನಗೆ ನನ್ನ ಸುತ್ತಲಿನ ಜನರ ಭಾವನಾತ್ಮ ಕ ನಡವಳಿಕೆಗಳನ್ನು ಗಮನಿಸುವುದು ಇಷ್ಟ. ಈ ಕಲಿಕೆಗೆ ಫೋಟೊಗ್ರಫಿ ಉತ್ತಮ ದಾರಿ' ಎನ್ನುತ್ತಾರೆ ಸಿದ್ಧಾರ್ಥ್ ವೈದ್ಯನಾಥನ್.
-ಹೇಮಾ ವೆಂಕಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.