ಮೊನ್ನೆ ಮೊನ್ನೆವರೆಗೂ ಮೈ ಕೊರೆಯುತಿದ್ದ ಚಳಿ ಮೆಲ್ಲಗೆ ಕರಗಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಬಿಸಿಲು ಚುರುಗುಟ್ಟಲು ಆರಂಭಿಸಿದೆ. 11 ಗಂಟೆ ದಾಟುತ್ತಿದ್ದಂತೇ ಬಿಸಿಲ ಧಗೆ. ಪ್ರತಿ ಸಲದಂತೆ ಈ ಬಾರಿ ಬಿಸಿಲು ಹೆಚ್ಚಿರುತ್ತದಂತೆ ಎನ್ನುವ ಸಾಮಾನ್ಯ ಮಾತು ಜನರ ಬಾಯಲ್ಲಿ.
ಬೇಸಿಗೆ ಬಂತೆಂದರೆ ಸಾಕು, ಬಿಸಿಲು ಸಿಕ್ಕಾಪಟ್ಟೆ ಎಂದು ಗೊಣಗುವವರೇ ಹೆಚ್ಚು. ಬಿಸಿಲನ್ನು ಶಪಿಸುತ್ತಲೇ ಜನ ಕಾಲದೊಂದಿಗೆ ಹೆಜ್ಜೆ ಹಾಕುತ್ತಾರೆ. ಆದರೆ ಎಳನೀರು, ಹಣ್ಣಿನ ವ್ಯಾಪಾರಿಗಳು, ಜ್ಯೂಸ್ ಅಂಗಡಿ ಹಾಗೂ ಐಸ್ಕ್ರೀಂ ಮಾರಾಟಗಾರರಿಗೆ ಬೇಸಿಗೆ ಅಂದರೆ ಸುಗ್ಗಿ ಕಾಲ.
ಚಳಿಗಾಲ ಇನ್ನೂ ಮುಗಿಯುವ ಹಂತದಲ್ಲಿರುವಾಗಲೇ ರಸ್ತೆ ಬದಿ ತೆರೆದುಕೊಳ್ಳುವ ರಾಶಿರಾಶಿ ಕಲ್ಲಂಗಡಿಗಳು, ಮಟಮಟ ಮಧ್ಯಾಹ್ನದಲ್ಲಿ ಎಳನೀರು, ಜ್ಯೂಸ್ ಅಂಗಡಿಗಳ ಮುಂದೆ ಬೆವರಿ ನಿಂತ ಜನರ ಸಾಲು, ಹಣ್ಣಂಗಡಿಗಳ ಮುಂದೆ ಈ ಕಾಲಕ್ಕೆ ಸೂಕ್ತ ಹಣ್ಣು ಯಾವುದು ಎಂದು ಖರೀದಿಸಲು ಮುಂದಾದ ಮಂದಿಯ ಚಿತ್ರಣಗಳು ಸಾಮಾನ್ಯ.
ಅದರಲ್ಲೂ ಕೆ.ಆರ್.ಮಾರ್ಕೆಟ್ಗೆ ಭೇಟಿ ಕೊಟ್ಟರೆ ಬೇಸಿಗೆಯ ಸಂಪೂರ್ಣ ಪರಿಚಯ ಒಮ್ಮೆಲೇ ಆದಂತಹ ಅನುಭವ.
ಬೇಸಿಗೆ ಕಾಲದಲ್ಲಿ ಮಾರ್ಕೆಟ್ನಲ್ಲಿ ಎಲ್ಲಲ್ಲೂ ಹಣ್ಣುಗಳದ್ದೇ ಕಾರುಬಾರು. ಎಲ್ಲಾ ಹಣ್ಣುಗಳಿಗಿಂತ ಕಲ್ಲಂಗಡಿ, ಖರ್ಬೂಜ, ಮೂಸಂಬಿಗೆ ಬೇಡಿಕೆ ಹೆಚ್ಚು. ಈ ಹಣ್ಣುಗಳಲ್ಲಿ ನೀರಿನಂಶ ಹೆಚ್ಚಿರುವುದರಿಂದ ಖರೀದಿಯೂ ಜೋರು.
ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚಾಗಿ ತಮಿಳುನಾಡಿನ ತಿರುವಣ್ಣಾಮಲೈನಿಂದ ತರಿಸಿಕೊಳ್ಳಲಾಗುತ್ತೆ. ವಾರಕ್ಕೆ 3ರಿಂದ 4 ಟನ್ ಲೋಡ್ ಮಾರಾಟವಾಗುತ್ತವೆ ಎನ್ನುತ್ತಾರೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಸುರೇಶ್.
ಮಾರ್ಕೆಟ್ನಲ್ಲಿ ಕಲ್ಲಂಗಡಿ ಕೆ.ಜಿಗೆ 5ರಿಂದ 7 ರೂ ಬೆಲೆಯಿದೆ. ಕಿರಣ್, ರಾಮ್ದಾರ್, ಮೈಕೋ 6, ಅಕ್ರಾಮನಿ, ಆಸ್ಟ್ರೇಲಿಯಾ ವಾಟರ್ಮೆಲನ್ ಹೀಗೆ ತರಹೇವಾರಿ ಬಗೆಯ ಕಲ್ಲಂಗಡಿ ಹಣ್ಣುಗಳು ಇರುತ್ತವೆ. ಎಲ್ಲ ಬಗೆಯ ಹಣ್ಣುಗಳನ್ನೂ ಜನ ಕೊಂಡುಕೊಳ್ಳುತ್ತಾರೆ ಎನ್ನುತ್ತಾರೆ ಅವರು.
ಆದರೆ ಮಾರ್ಕೆಟ್ನಲ್ಲಿ 5 ರೂ.ಗೆ ಸಿಗುವ ಹಣ್ಣುಗಳು ರಸ್ತೆ ಬದಿಯಲ್ಲಿ ಅಷ್ಟು ಕಡಿಮೆ ಬೆಲೆಗೆ ಸಿಗುವುದಿಲ್ಲ. ರಸ್ತೆಬದಿ ಕೆ.ಜಿ.ಗೆ 12 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ.
ಹಣ್ಣುಗಳನ್ನು ಕೋಲಾರದಿಂದ ತರಿಸಲಾಗುತ್ತೆ. ಬೆಳಿಗ್ಗೆ ವ್ಯಾಪಾರ ಆರಂಭಿಸಿದರೆ ರಾತ್ರಿಯಾದರೂ ಕೊಂಡುಕೊಳ್ಳಲು ಜನರು ಬರುತ್ತಲೇ ಇರುತ್ತಾರೆ ಎನ್ನುತ್ತಾರೆ ವಿಜಯನಗರದ ಕಲ್ಲಂಗಡಿ ವ್ಯಾಪಾರಿ ಮಹಮದ್ ರಫೀಕ್.
ಒಂದು ಕೆ.ಜಿ. ಕಲ್ಲಂಗಡಿಗೆ 12 ರೂನಂತೆ ವ್ಯಾಪಾರ ಮಾಡುತ್ತೇವೆ. ಪೀಸ್ ಲೆಕ್ಕವೂ ಇದೆ. ಒಂದು ಕಲ್ಲಂಗಡಿ ಸುಮಾರು 4ರಿಂದ 5 ಕೆ.ಜಿ. ಇರುತ್ತದೆ. ದಿನಕ್ಕೆ ಏನಿಲ್ಲವೆಂದರೂ 20 ಕೆ.ಜಿ ಕಲ್ಲಂಗಡಿ ವ್ಯಾಪಾರ ಖಚಿತ ಎನ್ನುತ್ತಾರೆ ಅವರು.
ಎಳನೀರು ಗಾಡಿಯವರಿಗೂ ಬೇರೆ ಕಾಲಕ್ಕೆ ಹೋಲಿಸಿದರೆ ವ್ಯಾಪಾರದಲ್ಲಿ ಏರಿಕೆ ಇರುತ್ತದಂತೆ. ಮಾಮೂಲಿಗಿಂತ ಬೇಸಿಗೆಯಲ್ಲಿ ಪ್ರತಿ ಎಳನೀರಿಗೆ 2 ರೂ. ಹೆಚ್ಚು. ಎಳನೀರು ವ್ಯಾಪಾರ ಎಲ್ಲ ಕಾಲದಲ್ಲೂ ಹೆಚ್ಚಿರುತ್ತೆ.
ಆದರೆ ಬೇಸಿಗೆ ಬಂತೆಂದರೆ ವ್ಯಾಪಾರದಲ್ಲಿ ಇನ್ನೂ ಏರಿಕೆಯಾಗುತ್ತದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ರಂಗಪ್ಪ. ಇದೀಗ ಎಳನೀರಿಗೆಂದು ವಿಶೇಷವಾಗಿ `ಕಾರ್ನರ್~ಗಳನ್ನು ತೆರೆದಿರುವುದರಿಂದ ಬೆಳ್ಳಂಬೆಳಗ್ಗೆಯೇ ಜನ ಅದರ ಮುಂದೆಯೂ ಜಮಾಯಿಸಿರುತ್ತಾರೆ.
ಇನ್ನು ಜ್ಯೂಸ್ ಅಂಗಡಿಗಳಂತೂ ಈ ಕಾಲದಲ್ಲಿ ಜನಗಳಿಂದ ತುಂಬಿ ತುಳುಕುತ್ತಿರುತ್ತವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಲ್ಲಂಗಡಿ, ಮೂಸಂಬಿ, ಪೈನಾಪಲ್, ನಿಂಬೆ ಜ್ಯೂಸ್ಗಳನ್ನು ಹೆಚ್ಚು ಕುಡಿಯುತ್ತಾರೆ. ಚಾಟ್ಸ್ ವ್ಯಾಪಾರ ಸ್ವಲ್ಪ ಕುಗ್ಗುತ್ತದೆ. ಆದರೆ ಜ್ಯೂಸ್ ವ್ಯಾಪಾರದಿಂದ ಸಮತೋಲನ ಕಾಯ್ದುಕೊಳ್ಳುತ್ತೇವೆ ಎನ್ನುತ್ತಾರೆ ಭುವನ ಜ್ಯೂಸ್- ಚಾಟ್ಸ್ ಸೆಂಟರ್ನ ಹರೀಶ್.
ಐಸ್ ಕ್ರೀಂ ವ್ಯಾಪಾರಿಗಳಿಗಂತೂ ಲಾಭದ ದಾರಿಗಳು ಎರಡು. ಒಂದೆಡೆ ಬೇಸಿಗೆ ಆರಂಭ ಹಂತದಲ್ಲಿ ಮದುವೆಗಳೂ ನಡೆಯುವುದರಿಂದ ಅಲ್ಲೂ ಐಸ್ಕ್ರೀಂ ಬೇಡಿಕೆ ಹೆಚ್ಚಿರುತ್ತದೆ. ಈ ಕಾಲ ಬಿಟ್ಟರೆ ವ್ಯಾಪಾರದಲ್ಲಿ ಸ್ವಲ್ಪ ಇಳಿಮುಖ ತೋರುತ್ತದೆ ಎನ್ನುತ್ತಾರೆ ಐಸ್ಕ್ರೀಂ ಪ್ಯಾಲೇಸ್ನ ಕರಣ್.
ಒಟ್ಟಿನಲ್ಲಿ ಬೇಸಿಗೆ ಮುಗಿದರೆ ಸಾಕಪ್ಪಾ ಎಂದು ಪರಿತಪಿಸುವ ಜನ ಒಂದೆಡೆಯಾದರೆ, ಬೇಸಿಗೆಯನ್ನೇ ತಮ್ಮ ಬಂಡವಾಳ ಮಾಡಿಕೊಳ್ಳುವ ಜನ ಇನ್ನೊಂದೆಡೆ. ಆದರೆ ಕಾಲ ಯಾರನ್ನೂ ಲೆಕ್ಕಿಸುವುದಿಲ್ಲ ಎಂಬುದಂತೂ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.