ADVERTISEMENT

ದಾದಾ, ಪಾರ್ಥಿಬನ್ ಮತ್ತು ಕಾವೇರಿ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ದಾದಾ, ಪಾರ್ಥಿಬನ್ ಮತ್ತು ಕಾವೇರಿ!
ದಾದಾ, ಪಾರ್ಥಿಬನ್ ಮತ್ತು ಕಾವೇರಿ!   

ತಮಿಳು ನಟ–ನಿರ್ದೇಶಕ ಪಾರ್ಥಿಬನ್ ಅವರು ನಟಿಸುತ್ತಿರುವ ‘ದಾದಾ ಈಸ್ ಬ್ಯಾಕ್’ ಸಿನಿಮಾ ಪ್ರಿಯರ ಮನರಂಜಿಸಲು ಅಣಿಯಾಗುತ್ತಿದೆ. ಹಿರಿತೆರೆಯ ಮೇಲೆ ಕಾಣಿಸಿಕೊಳ್ಳುವುದರ ಪೂರ್ವಭಾವಿಯಾಗಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.

ಕಾರ್ಯಕ್ರಮದ ಆರಂಭದಲ್ಲೇ ವಿಷ್ಣುವರ್ಧನ್ ಕುರಿತ ಮಾತು ಪ್ರಸ್ತಾಪಗೊಂಡಿತು. ‘ದಾದಾ ಈಸ್ ಬ್ಯಾಕ್‌’ ಎನ್ನುವುದು ಒಂದರ್ಥದಲ್ಲಿ ವಿಷ್ಣು ನೆನಪಿನ ಮರುಕಳಿಕೆಯೂ ಹೌದು. ಆದರೆ, ಈ ನಂಟು ಶೀರ್ಷಿಕೆಗಷ್ಟೇ ಸೀಮಿತ.

‘ಕನ್ನಡ ಚಿತ್ರರಂಗದಲ್ಲಿ ವಿಷ್ಣು ಅವರನ್ನು ದಾದಾ ಎಂದು ಕರೆಯಲಾಗುತ್ತಿತ್ತು. ಆದರೆ ದಾದಾ ಈಸ್ ಬ್ಯಾಕ್‌ ಚಿತ್ರ ಅವರ ಕುರಿತು ಅಲ್ಲ’ ಎಂಬ ಸ್ಪಷ್ಟನೆಯ ಮಾತುಗಳು ಚಿತ್ರತಂಡದಿಂದ ಕೇಳಿಬಂದವು.

ADVERTISEMENT

‘ಗೊಂಬೆಗಳ ಲವ್’ ಚಿತ್ರ ನಿರ್ದೇಶಿಸಿದ್ದ ಸಂತೋಷ್ ಅವರು ‘ದಾದಾ...’ ಚಿತ್ರದ ನಿರ್ದೇಶಕರು. ‘ಒಳ್ಳೆಯ ಸಿನಿಮಾ ಮಾಡಲು ತುಸು ಹೆಚ್ಚಿನ ಸಮಯ ಬೇಕಾಯಿತು. ಹುಕುಂ ಎನ್ನುವ ಪದ ಈ ಸಿನಿಮಾದಲ್ಲಿ ವಿಭಿನ್ನವಾಗಿ ಬಿಂಬಿತವಾಗಿದೆ. ಹುಕುಂ ಎಂದರೆ ಆದೇಶ. ಈ ಪದ ಸಿನಿಮಾದಲ್ಲಿ ಯಾವ ರೀತಿಯ ಪಾತ್ರ ವಹಿಸಿದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು’ ಎಂದರು.

ಸಂತೋಷ್

ಕಥಾ ನಾಯಕಿ ಶ್ರಾವ್ಯಾ ಅವರು ಚಿತ್ರದಲ್ಲಿ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ ನಿಭಾಯಿಸಿದ್ದಾರೆ. ‘ಒಂದು ಗ್ಯಾಂಗ್ ವಾರ್ ನಡೆಯುತ್ತದೆ. ಅದರ ನಡುವಿನಲ್ಲೇ ಒಂದು ಪ್ರೇಮಕಥೆಯೂ ಇದೆ’ ಎಂದು ಶ್ರಾವ್ಯಾ ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡುವ ಸರದಿ ಪಾರ್ಥಿಬನ್ ಅವರದ್ದಾಗಿತ್ತು. ‘ಕನ್ನಡದ ಕಲಾವಿದರು ತಮಿಳು ಸಿನಿಮಾಗಳಲ್ಲಿ ನಟಿಸಬೇಕು, ತಮಿಳಿನ ಕಲಾವಿದರು ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಬೇಕು. ಎರಡೂ ಕಡೆಯಿಂದ ಕೊಡು–ಕೊಳ್ಳುವಿಕೆ ಸಾಧ್ಯವಾದರೆ ಕಾವೇರಿ ಸಮಸ್ಯೆಯೂ ಪರಿಹಾರ ಆಗುತ್ತದೆ’ ಎಂದರು.

ಈ ಸಿನಿಮಾದ ನಿರ್ದೇಶಕ ಸಂತೋಷ್ ಅವರು ‘ರಾಜಕೀಯ ಸ್ಟಂಟ್‌’ಗೆ ಕೈಹಾಕಿದ್ದಾರೆ ಎಂದು ಪಾರ್ಥಿಬನ್ ಮೆಚ್ಚುಗೆ ಸೂಚಿಸಿದರು. ಚಿತ್ರಕ್ಕೆ ಸಂಗೀತ ನೀಡಿದರು ಅನೂಪ್. ಅರುಣ್ ಮತ್ತು ಅಜಯ್ ರಾಜ್ ಅರಸ್ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.


ಪಾರ್ಥಿಬನ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.