ಸಾಮಾನ್ಯವಾಗಿ ವೇಷ ಹಾಕಿ, ಚಿಕ್ಕಾಸು ಕೇಳುವವರ ಆದ್ಯತೆ ಹನುಮಂತ. ಹಿಂದೆ ಒಂದು ಬಾಲ ಸಿಕ್ಕಿಸಿಕೊಂಡು, ಮೂತಿ ಸದಾ ಉಬ್ಬಾಗಿರುವಂತೆ ಮೇಕಪ್ ಹಚ್ಚಿಕೊಂಡು, ಹಸಿರೋ ನೀಲಿಯೋ ಬಣ್ಣವನ್ನು ಬಳಿದುಕೊಂಡು ಹನುಮ ದೇವರಾಗಿ ತಾವೇ ನಿಂದು ಜನರಲ್ಲಿ ಕೈಚಾಚುವವರು ನಗರದಲ್ಲಿ ಆಗೀಗ ಕಾಣುತ್ತಿರುತ್ತಾರೆ.
ಆದರೆ ಮೆಜೆಸ್ಟಿಕ್ ಬಳಿಯ ಲಕ್ಷ್ಮಣಪುರದಲ್ಲಿನ ಪಾತಾಳ ಆಂಜನೇಯ ಸ್ವಾಮಿಯ 30ನೇ ವರ್ಷದ ಮಹೋತ್ಸವವು `ಹನುಮ ಜಯಂತಿ'ಯ ದಿನ (ಮಂಗಳವಾರ) ಕಳೆಗಟ್ಟಿದ ರೀತಿ ಈ ವೇಷಧಾರಿಗಳಿಗಿಂತ ಭಿನ್ನವಾಗಿತ್ತು. ಹನುಮನ ವೇಷ ಧರಿಸಿ ಬಂದ ಅನೇಕರು ಅಲ್ಲಿ ಗದೆಗಳನ್ನು ಹಿಡಿದುಕೊಂಡು `ಚೇಷ್ಟೆ' ಮಾಡಿದರು. ಮರದಿಂದ ಒಬ್ಬರು ಜಿಗಿದರೆ, ಕಾಂಪೌಂಡ್ನಿಂದ ಮತ್ತೊಬ್ಬರು ನೆಗೆದರು. ಪ್ರಸಾದ ವಿನಿಯೋಗ ಮಾಡುವವರೂ ವೇಷಧಾರಿಗಳಾಗಿ ಗಮನ ಸೆಳೆದರು. ಅಷ್ಟೇ ಏಕೆ, ದ್ವಿಚಕ್ರ ವಾಹನದ ಮೇಲೆ ಅವರು ಓಡಾಡಿದಾಗ, ಅಕ್ಕಪಕ್ಕದವರ ಗಮನವೆಲ್ಲಾ ಅವರತ್ತಲೇ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.