ADVERTISEMENT

ಮುದ ನೀಡಿದ ಸಂಗೀತ ಸಂಜೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಅಖಿಲ ಹವ್ಯಕ ಕಲಾವೇದಿಕೆ ಹಾಗೂ ಕೊಬಾಲ್ಟ್ ಆಫ್ ಆರ್ಟ್ ಅಂಡ್ ಮ್ಯೂಸಿಕ್ ಫೋರಂ ಸಹಯೋಗದಲ್ಲಿ ಇತ್ತೀಚೆಗೆ ಹಿಂದೂಸ್ತಾನಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ವಾಣಿಶ್ರೀ ಹೆಗಡೆ ಅವರು ರಾಗ `ಶ್ಯಾಮಕಲ್ಯಾಣ'ವನ್ನು ವಿಲಂಬಿತ್ ಲಯದಲ್ಲಿ `ಹಮಾರೇ ಪಿಯಾಕೆ... ಸಬ್ ಬಾತೆ' ಮೂಲಕ ಮುಕ್ತಕಂಠದಿಂದ ಆರಂಭಿಸಿದರು. ನಂತರ ಕಲಾವತಿಯಲ್ಲಿ ಝಪ್ ತಾಲದಲ್ಲಿನ `ಹೇ ಗಂಗೇ ತ್ರಿವೇಣಿ' ಹಾಡಿ ರಾಗ ಮಿಶ್ರ ಕಮಾಜ್‌ನಲ್ಲಿ ಹೋಳಿ ಸಂಬಂಧಿತ `ಖೇಲೊ ನಂದಲಾಲ್' ಹಾಡಿದರು. ಕೊನೆಯಲ್ಲಿ ಪುರಂದರದಾಸರ ಕೃತಿ `ಕೊಡು ಬೇಗ ದಿವ್ಯಮತಿ ಸರಸ್ವತಿ' ಹಾಡಿ ಕಲಾಸಕ್ತರನ್ನು ರಂಜಿಸಿದರು.

ನಂತರ ಎಂ.ವಿ. ಹೆಗಡೆ ಅವರು ರಾಗ `ಮಾರು ಬಿಹಾಗ'ದಿಂದ ಗಾಯನ ಆರಂಭಿಸಿ ದರ್ಭಾರಿ, ಅಡಾಣ್ ಹಾಡಿದರು. ರಾಗದ ಹರಿವು, ಹಿಡಿತ ಶ್ರೋತೃಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಕೊನೆಯಲ್ಲಿ `ಚಕೋರಂಗೆ ಚಂದ್ರಮನ' ವಚನ ಹಾಡಿದರು. ಶಶಿಭೂಷಣ್ ಗುರ್ಜರ್, ನಾಗರಾಜ ಹೆಗಡೆ (ತಬಲಾ), ಸೂರ್ಯ ಉಪಾಧ್ಯಾಯ (ಹಾರ್ಮೋನಿಯಂ) ಹಾಗೂ ವಿನಯ್ ಹೆಗಡೆ, ಅಶ್ವಿನಿ ಹೆಗಡೆ (ತಂಬೂರಿ) ವಾದ್ಯ ಸಹಕಾರ ನೀಡಿದರು.

ವಾಣಿಶ್ರೀ ಹೆಗಡೆ ಅವರು ಹಾಡಿರುವ, ಸುನಾದ ಸಂಸ್ಥೆ  ಹೊರತಂದಿರುವ ಸೀಡಿಯನ್ನು ಬದರೀನಾಥ್ ಅವರು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಎಸ್.ಜಿ. ಹೆಗಡೆ ಮತ್ತು ರಂಜರತನ್ ಕುಲಕರ್ಣಿ ಉದ್ಘಾಟಿಸಿದರು. ಕಲಾವೇದಿಕೆ ಸಂಚಾಲಕ ಗಣಪತಿ ಎಸ್. ಹೆಗಡೆ, ಕಲಾವೇದಿಕೆ ಕಾರ್ಯದರ್ಶಿ ಪ್ರಶಾಂತ ಭಟ್ಟ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.